ಪಾಟ್ನಾ: ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಯೊಬ್ಬರ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಇನ್ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ ಅವರು ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಾಸ್ವಾನ್, ಭಾರದ್ವಾಜ್ ಅವರು ನನ್ನ ಹಾಗೂ ಇತರ ನಾಯಕರ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಸಂಬಂಧ ಅವರ ವಿರುದ್ಧ ದೂರು ದಾಖಲಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ ಎಂದಿದ್ದಾರೆ.
ಜನಪ್ರತಿನಿಧಿಯಾಗಿರುವ ನನ್ನನ್ನು ಭೇಟಿಯಾಗಲು ಹಲವರು ಬರುತ್ತಾರೆ. ಈ ವೇಳೆ ಫೋಟೊಗಳನ್ನು ತೆಗೆದುಕೊಳ್ಳುತ್ತಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ‘ಅವರು ನಮ್ಮ ಪರಿಚಯಸ್ಥರು’ ಎಂದು ಹೇಳಿಕೊಳ್ಳುವುದು ಹೆಸರಿನ ದುರುಪಯೋಗವಾಗಿದೆ. ತನ್ನ ವಿರುದ್ಧ ದೂರು ದಾಖಲಾಗದಂತೆ ನಾನು ಹಾಗೂ ನಮ್ಮ ಪಕ್ಷ ರಕ್ಷಣೆ ನೀಡಿದ್ದೇವೆ ಎಂದೂ ಆತ(ಭಾರದ್ವಾಜ್) ಹೇಳಿಕೊಂಡಿದ್ದಾನೆ. ಈ ಹೇಳಿಕೆ ವಿರುದ್ಧವೂ ದೂರು ದಾಖಲಿಸಲಾಗಿದೆ ಎಂದು ಪಾಸ್ವಾನ್ ತಿಳಿಸಿದ್ದಾರೆ.
ಒಬ್ಬ ವ್ಯಕ್ತಿಯನ್ನು ಸಾಯುವಂತೆ ಹೊಡೆದಿದ್ದೇನೆ ಎಂದು ಆತ(ಭಾರದ್ವಾಜ್) ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾನೆ. ಇಂತಹ ಹೇಳಿಕೆಗಳ ಹೊರತಾಗಿಯೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಅದು ದೇಶಕ್ಕೆ ಮತ್ತು ಜನರಿಗೆ ತಪ್ಪು ಸಂದೇಶ ನೀಡಲಿದೆ ಎಂದು ಪಾಸ್ವಾನ್ ಹೇಳಿದ್ದಾರೆ.
ನಾವು ಸಂತ್ರಸ್ತ ಕುಟುಂಬದೊಂದಿಗಿದ್ದೇವೆ. ಅವರಿಗೆ ನ್ಯಾಯ ದೊರಕುವಂತೆ ಮಾಡುವುದು ನನ್ನ ಜವಾಬ್ದಾರಿ. ಕಾನೂನನ್ನು ಬಹಿರಂಗವಾಗಿ ಗೇಲಿ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
ವಿಷಯದ ಗಂಭೀರತೆಯನ್ನು ಪರಿಗಣಿಸಿ ಮತ್ತು ಆ ವ್ಯಕ್ತಿಯು ನನ್ನ ಹೆಸರನ್ನು ಮತ್ತು ಇತರ ಹಲವಾರು ರಾಜಕಾರಣಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡಿರುವುದರಿಂದ, ನಾನು ಅವರ ವಿರುದ್ಧ ಔಪಚಾರಿಕ ದೂರು ದಾಖಲಿಸಿದ್ದೇನೆ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ದೆಹಲಿ ಪೊಲೀಸರನ್ನು ಒತ್ತಾಯಿಸಿದ್ದೇನೆ ಎಂದು ಹೇಳಿದ್ದಾರೆ.