ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಬಹುಮುಖ್ಯ ಬೇಡಿಕೆಯೊಂದಕ್ಕೆ ಇದೀಗ ಹಸಿರು ನಿಶಾನೆ ಸಿಕ್ಕಿದೆ. ನ್ಯಾಯಾಲಯಗಳ ಕಟಕಟೆಯಲ್ಲಿ ನಿಂತು ಲಕ್ಷಾಂತರ ಜನರಿಗೆ ನ್ಯಾಯ ಒದಗಿಸುವ ನ್ಯಾಯಾಧೀಶರ ಸೇವಾವಧಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ದೇಶದ ಎಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60 ರಿಂದ 62 ಕ್ಕೆ ಏರಿಸುವಂತೆ ಆದೇಶ ನೀಡಿದ್ದು, ಇದು ಇಡೀ ನ್ಯಾಯಾಂಗ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:
ನಿವೃತ್ತಿ ವಯಸ್ಸನ್ನು 60 ರಿಂದ 62 ಕ್ಕೆ ಏರಿಕೆ
ದೇಶದ ಜಿಲ್ಲಾ ನ್ಯಾಯಾಲಯಗಳಲ್ಲಿನ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60 ರಿಂದ 62 ಕ್ಕೆ ಏರಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ನಿರ್ಣಯವನ್ನು ಪ್ರಕಟಿಸಿದೆ. ದೇಶಾದ್ಯಂತ ಕೆಳಹಂತದ ನ್ಯಾಯಾಲಯಗಳಲ್ಲಿ 5 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಅನುಭವಸ್ಥ ನ್ಯಾಯಾಧೀಶರ ಕೊರತೆಯನ್ನು ನೀಗಿಸಲು ಈ ಕ್ರಮಕ್ಕೆ ಮುಂದಾಗಿದೆ.
ಮುಂದುವರೆದು, ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 62ಕ್ಕೆ ಏರಿಸಲು ಈಗಾಗಲೇ ಸಮ್ಮತಿ ಸೂಚಿಸಿರುವ ಕರ್ನಾಟಕ ಸೇರಿದಂತೆ ಛತ್ತೀಸ್ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಸಿಕ್ಕಿಂ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ತನ್ನ ಸೇವಾ ನಿಯಮಾವಳಿಗಳನ್ನು ಎರಡು ತಿಂಗಳ ಒಳಗಾಗಿ ತಿದ್ದುಪಡಿ ಮಾಡುವಂತೆ ಕೋರ್ಟ್ ಸೂಚಿಸಿದೆ.
ಆದರೆ, ಈ ವಯೋಮಿತಿ ಹೆಚ್ಚಳವು ಎಲ್ಲರಿಗೂ ನೇರವಾಗಿ ಅನ್ವಯಿಸುವುದಿಲ್ಲ. ಅದರಂತೆ, ನ್ಯಾಯಾಧೀಶರು 60 ವರ್ಷ ತುಂಬಿದಾಗ ಸಂಬಂಧಪಟ್ಟ ಹೈಕೋರ್ಟ್ ಅವರ ಕಾರ್ಯಕ್ಷಮತೆ, ಪ್ರಾಮಾಣಿಕತೆ ಮತ್ತು ಸೂಕ್ತತೆಯನ್ನು ಪರಿಶೀಲಿಸುತ್ತದೆ. ಆ ಪರಿಶೀಲನೆಯಲ್ಲಿ ಅರ್ಹರಾದವರಿಗೆ ಮಾತ್ರ 62 ವರ್ಷದವರೆಗೆ ಸೇವೆಯಲ್ಲಿ ಮುಂದುವರಿಯಲು ಅವಕಾಶ ನೀಡಲಾಗುತ್ತದೆ.
ನಿರಾಕರಿಸಿದ ರಾಜ್ಯಗಳಿಗೆ ಎರಡು ವಾರಗಳ ಗಡುವು
ಮತ್ತೊಂದೆಡೆ, ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಹರಿಯಾಣ ಮತ್ತು ಕೇರಳ ಸೇರಿದಂತೆ ಇತರ ಹಲವು ರಾಜ್ಯಗಳು ಆರ್ಥಿಕ ಹೊರೆ ಹಾಗೂ ಇತರ ಸರ್ಕಾರಿ ನೌಕರರಿಂದಲೂ ಇಂತಹುದೇ ಬೇಡಿಕೆ ಬರಬಹುದು ಎಂಬ ಕಾರಣ ನೀಡಿ ಈ ಪ್ರಸ್ತಾವನೆಯನ್ನು ವಿರೋಧಿಸಿದ್ದವು ಅಥವಾ ತಟಸ್ಥವಾಗಿದ್ದವು. ಆದರೆ ಸುಪ್ರೀಂ ಕೋರ್ಟ್ ಈ ವಾದವನ್ನು ತಳ್ಳಿಹಾಕಿದ್ದು, "ನ್ಯಾಯಾಂಗ ಅಧಿಕಾರಿಗಳನ್ನು ಸಾಮಾನ್ಯ ಸರ್ಕಾರಿ ನೌಕರರಂತೆ ಪರಿಗಣಿಸಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದೆ. ಹಾಗಾಗಿ, ನಿರಾಕರಿಸಿದ ಎಲ್ಲಾ ರಾಜ್ಯಗಳು ಎರಡು ವಾರಗಳ ಒಳಗಾಗಿ ಈ ಬಗ್ಗೆ ಮರುಚಿಂತನೆ ನಡೆಸಿ ವರದಿ ಸಲ್ಲಿಸುವಂತೆ ಗಡುವು ನೀಡಿದೆ.
ಏತನ್ಮಧ್ಯೆ, ಮಾರ್ಚ್ 31, 2026 ರ ನಂತರ ಅಥವಾ ಆ ದಿನದಂದು ನಿವೃತ್ತರಾಗಿರುವ ನ್ಯಾಯಾಧೀಶರಿಗೂ ಕೋರ್ಟ್ ಸೀಮಿತ ಅವಕಾಶ ನೀಡಿದೆ. ಅವರು ಬೇರೆ ಯಾವುದೇ ಸರ್ಕಾರಿ ಲಾಭದಾಯಕ ಹುದ್ದೆಯನ್ನು ಹೊಂದಿರದಿದ್ದರೆ, ಹೈಕೋರ್ಟ್ನ ಕಾರ್ಯಕ್ಷಮತೆ ಮೌಲ್ಯಮಾಪನಕ್ಕೆ ಒಳಪಟ್ಟು ಪುನಃ ನ್ಯಾಯಾಂಗ ಸೇವೆಗೆ ಮರಳಬಹುದು.