'ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಖಾಸಗೀಕರಣಗೊಳಿಸಲಾಗುತ್ತಿಲ್ಲ. ಅಲ್ಲದೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾತ್ರವನ್ನು ವಿಸ್ತರಿಸುವ ಸರ್ಕಾರದ ಕ್ರಮದ ಕುರಿತು ಉದ್ಯೋಗಿಗಳಲ್ಲಿರುವ ಆತಂಕಗಳನ್ನು ನಿವಾರಿಸಲಾಗುವುದು' ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಭರವಸೆ ನೀಡಿದ್ದಾರೆ.
ಬೆಂಗಳೂರು ಸ್ಪೇಸ್ ಎಕ್ಸ್ಪೋ (Bengaluru Space Expo) ಸಂದರ್ಭದಲ್ಲಿ ಮಾತನಾಡಿದ ನಾರಾಯಣನ್, ಸಂಸ್ಥೆಯ ಭವಿಷ್ಯದ ಪಾತ್ರಕ್ಕೆ ಸಂಬಂಧಿಸಿದ ಸರ್ಕಾರದ ನೀತಿಯ ಬಗ್ಗೆ ಅಧಿಕೃತ ಸ್ಪಷ್ಟನೆ ಕೋರಿರುವ ಉದ್ಯೋಗಿಗಳ ಸಂಘಟನೆಗಳು ಸೇರಿದಂತೆ, ಇಸ್ರೋದ ಸಿಬ್ಬಂದಿಯ ಕೆಲವು ವರ್ಗಗಳು ವ್ಯಕ್ತಪಡಿಸಿದ ಕಳವಳಗಳಿಗೆ ಪ್ರತಿಕ್ರಿಯಿಸಿದರು.
'ಬಾಹ್ಯಾಕಾಶ ವಲಯದ ಸುಧಾರಣೆಗಳನ್ನು ಆರು ವರ್ಷಗಳ ಹಿಂದೆ ಜಾರಿಗೆ ತರಲಾಯಿತು. ಅದರನ್ವಯ, ನಾವು ಖಾಸಗಿ ವಲಯಕ್ಕೆ ಬೆಂಬಲ ಮತ್ತು ಮಾರ್ಗದರ್ಶನ ನೀಡುವ ಮೂಲಕ ಬಾಹ್ಯಾಕಾಶ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಬೇಕಿದೆ' ಎಂದು ನಾರಾಯಣನ್ ಹೇಳಿದರು.
ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಖಾಸಗಿ ಉದ್ಯಮವು ದೀರ್ಘಕಾಲದಿಂದ ಪ್ರಮುಖ ಪಾತ್ರ ವಹಿಸಿದೆ ಮತ್ತು ಉಡಾವಣಾ ವಾಹನಗಳ ತಯಾರಿಕೆಗೆ ಈಗಾಗಲೇ ನೂರಾರು ಭಾರತೀಯ ಕಂಪನಿಗಳು ಬೆಂಬಲ ನೀಡುತ್ತಿವೆ ಎಂಬುದನ್ನು ಒತ್ತಿ ಹೇಳಿದರು.
'ಪಿಎಸ್ಎಲ್ವಿ ಅಥವಾ ಜಿಎಸ್ಎಲ್ವಿ ಉಡಾವಣೆಯಾದಾಗಲೆಲ್ಲ, ಎಲ್ಲವನ್ನೂ ಇಸ್ರೋವೇ ಮಾಡುತ್ತದೆ ಎಂದು ಭಾವಿಸಬೇಡಿ. ಇದರ ಬಜೆಟ್ನ ಸುಮಾರು ಶೇ 80ರಷ್ಟು ಭಾಗವನ್ನು ಭಾರತೀಯ ಕೈಗಾರಿಕೆಗಳೇ ಹೂಡಿಕೆ ಮಾಡುತ್ತವೆ. ಸುಮಾರು 450 ಕೈಗಾರಿಕೆಗಳು ನಮಗಾಗಿ ಕಾರ್ಯನಿರ್ವಹಿಸುತ್ತಿವೆ' ಎಂದು ಹೇಳಿದರು.
ಭಾರತದ ಬಾಹ್ಯಾಕಾಶ ವಲಯದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ ಈ ಸ್ಪಷ್ಟನೆ ಬಂದಿದೆ. ನೀತಿಯಲ್ಲಿನ ಬದಲಾವಣೆಗಳು ಇಸ್ರೋದ ಪಾತ್ರ, ಅದರ ಸಿಬ್ಬಂದಿ ವರ್ಗ, ನೇಮಕಾತಿ ಪ್ರಕ್ರಿಯೆ ಮತ್ತು ಪ್ರಮುಖ ಸಾಮರ್ಥ್ಯಗಳನ್ನು ಉಳಿಸಿಕೊಳ್ಳುವ ಅದರ ಸಾಮರ್ಥ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿವೆ ಎಂಬುದರ ಕುರಿತು ಸ್ಪಷ್ಟನೆ ನೀಡುವಂತೆ ಇಸ್ರೋದ ಪ್ರಮುಖ ಕೇಂದ್ರಗಳ ನೌಕರರ ಸಂಘಟನೆಗಳು ಕೋರಿವೆ ಎಂದು ವರದಿಯಾಗಿದೆ.
'ಭಾರತವು ತನ್ನ ಉಡಾವಣಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ವರ್ಷಕ್ಕೆ ಸುಮಾರು 50 ಉಡಾವಣಾ ವಾಹನಗಳ ಅಗತ್ಯವಿದೆ. ಅಂತಹ ಗುರಿಯನ್ನು ಸಾಧಿಸಲು ಇಸ್ರೋ ಮತ್ತು ಭಾರತೀಯ ಕೈಗಾರಿಕಾ ವಲಯವನ್ನು ಒಳಗೊಂಡಿರುವ ಹೆಚ್ಚು ವಿಸ್ತೃತವಾದ ವ್ಯವಸ್ಥೆಯ ಅಗತ್ಯವಿರುತ್ತದೆ' ಎಂದು ಅವರು ಸೂಚಿಸಿದರು.
ಇಸ್ರೋವನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂಬ ಅಭಿಪ್ರಾಯಗಳನ್ನು ತಳ್ಳಿಹಾಕಿದ ಅವರು, 'ಇಸ್ರೋ ಖಾಸಗೀಕರಣಗೊಂಡಿಲ್ಲ' ಎಂದು ಸ್ಪಷ್ಟಪಡಿಸಿದರು.
ಲಿಖಿತ ಸ್ಪಷ್ಟನೆ ಕೋರಿದಾಗ, 'ಕೇವಲ ಒಂದೆರಡು ವ್ಯಕ್ತಿಗಳು ಅಥವಾ ಗುಂಪುಗಳು ಪತ್ರ ಸಲ್ಲಿಸಿದ ಕಾರಣಕ್ಕಾಗಿಯೇ ಅಧಿಕೃತ ಲಿಖಿತ ಪ್ರತಿಕ್ರಿಯೆಯನ್ನು ನೀಡುವುದು ಸೂಕ್ತವಲ್ಲ. ನಾವು 20,000 ಉದ್ಯೋಗಿಗಳನ್ನು ಹೊಂದಿದ್ದೇವೆ. ಆದರೆ ನಾವು ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡುತ್ತೇವೆ' ಎಂದು ಅವರು ಹೇಳಿದರು.
ಖಾಸಗಿ ಕಂಪನಿಗಳ ಹೆಚ್ಚುತ್ತಿರುವ ಪಾತ್ರವು ದೇಶದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವವನ್ನು ಕುಗ್ಗಿಸುವ ಉದ್ದೇಶ ಹೊಂದಿಲ್ಲ, ಬದಲಿಗೆ ಭಾರತದ ಒಟ್ಟಾರೆ ಬಾಹ್ಯಾಕಾಶ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದು ತಮ್ಮ ಸಿಬ್ಬಂದಿಗೆ ತಿಳಿಸಿದ್ದಾರೆ.