ಥಾಣೆ: ಬಾಲಿವುಡ್ ನಟ ಸಂಜಯ್ ದತ್ , ನನಗೆ ಮರಾಠಿ ಮಾತನಾಡಲು ಬರುವುದಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರನ್ನು ಮುಜುಗರಕ್ಕೆ ಸಿಲುಕಿಸಿದ ಘಟನೆ ನಡೆದಿದೆ.
ಥಾಣೆಯಲ್ಲಿ ಸರ್ನಾಯಕ್ ಆಯೋಜಿಸಿದ್ದ ದಹಿ ಹಂಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಜಯ್ ದತ್, 'ಪ್ರತಾಪ್ಭಾಯ್, ನಾನು ಪುಣೆಯ ಯರವಾಡ ಜೈಲಿನಲ್ಲಿ 6 ವರ್ಷಗಳ ಕಾಲ ಇದ್ದೆ. ಆದರೆ ಕೆಲವು ವಾಕ್ಯಗಳನ್ನು ಹೊರತುಪಡಿಸಿ ನನಗೆ ಮರಾಠಿ ಕಲಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಬಳಿಕ ಇಲ್ಲಿ ನೆರೆದಿರುವ ಎಲ್ಲರಿಗೂ ನಮಸ್ಕಾರ್ ಎಂದು ಹೇಳಿದರು ಮತ್ತು 'ಹರ್ ಹರ್ ಮಹಾದೇವ್' ಎಂಬ ಘೋಷಣೆ ಕೂಗಿದರು.
ಮರಾಠಿ ಬಗ್ಗೆ ಸಂಜಯ್ ದತ್ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ ಮಹಾರಾಷ್ಟ್ರದ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ತಿಳಿದಿರಬೇಕು ಎಂದು ಸರ್ನಾಯಕ್ ಒತ್ತಾಯಿಸುತ್ತಿದ್ದಾರೆ. ಮರಾಠಿ ಭಾಷೆ ತಿಳಿದಿಲ್ಲದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಪರವಾನಗಿ ರದ್ದುಪಡಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಈಗ ಸಚಿವರ ನಿಲುವು ಟೀಕೆಗೆ ಗುರಿಯಾಗಿದ್ದು, ನೆಟ್ಟಿಗರು ಸರ್ನಾಯಕ್ ಅವರ ದ್ವಂದ್ವ ನಿಲುವನ್ನು ಟೀಕಿಸುತ್ತಿದ್ದಾರೆ.
6 ವರ್ಷಗಳಲ್ಲಿ ಮರಾಠಿ ಕಲಿಯುವುದಕ್ಕೆ ಆಗಲಿಲ್ಲ ಎಂದು 'ಸಂಜುಬಾಬಾಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರ ಮುಂದೆ ಒಪ್ಪಿಕೊಂಡಿದ್ದಾರೆ. ಆದರೆ 3 ತಿಂಗಳೊಳಗೆ ಕ್ಯಾಬ್, ರಿಕ್ಷಾವಾಲಾ ಚಾಲಕರು ಮೂರು ತಿಂಗಳಲ್ಲಿ ಮರಾಠಿ ಕಲಿಯಬೇಕು ಎಂದು ಸರ್ನಾಯಕ್ ದಾದಾಗಿರಿ ಮಾಡ್ತಾ ಇದ್ದಾರೆ. ಸೆಲೆಬ್ರಿಟಿ ಆಗಿರುವುದರಿಂದ ಸಂಜಯ್ ದತ್ ಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ಭಾಷೆಗೆ ಸಂಬಂಧಿಸಿದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. 3 ತಿಂಗಳೊಳಗೆ ಕ್ಯಾಬ್, ರಿಕ್ಷಾವಾಲಾ ಚಾಲಕರು ಮೂರು ತಿಂಗಳಲ್ಲಿ ಮರಾಠಿ ಕಲಿಯಬೇಕು ಎಂದು ಸರ್ನಾಯಕ್ ಎಚ್ಚರಿಕೆ ನೀಡಿದ್ದರು. ಇದು ತೀವ್ರ ಸ್ವರೂಪ ಪಡೆದುಕೊಂಡಾಗ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಧ್ಯಪ್ರವೇಶಿಸಿ ದಂಡನಾತ್ಮಕ ಕ್ರಮವನ್ನು ಮುಂದೂಡಿದ್ದರು. ಚಾಲಕರಿಗೆ ಮರಾಠಿ ಕಲಿಯಲು ಒಂದು ವರ್ಷದ ಕಾಲಾವಕಾಶ ನೀಡಿದ ಅವರು, ಈ ಅವಧಿಯಲ್ಲಿ ಯಾವುದೇ ದಂಡ ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಮರಾಠಿ ಕಲಿಯಲು ಸಾಧ್ಯವಾಗಲಿಲ್ಲ ಎಂಬ ದತ್ ಅವರ ಹೇಳಿಕೆ ಹಾಗೂ ಅವರ ಪಕ್ಕದಲ್ಲೇ ನಿಂತು ಸರ್ನಾಯಿಕ್ ನಗುತ್ತಿರುವುದು, ಸಚಿವರ ಧ್ವಂದ ನಿಲುವನ್ನು ತೋರಿಸುತ್ತದೆ ಎಂದು ಕೆಲವರು ಲೇವಡಿ ಮಾಡುತ್ತಿದ್ದಾರೆ.