ಗುರುಗ್ರಾಮ: ಮನೆಯವರು ಪಕ್ಕದ ಮನೆಯವರ ಜೊತೆ ಮಾತನಾಡುತ್ತಿದ್ದಾಗಲೇ 2 ವರ್ಷದ ಮಗು ರಸ್ತೆ ಮೇಲೆ ಬಂದಿದ್ದು, ಈ ವೇಳೆ ಅಲ್ಲಿ ಬಂದ ಕಾರು ಹರಿದು ಸಾವನ್ನಪ್ಪಿರುವ ದಾರುಣ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ಗುರುಗ್ರಾಮದ ಸೆಕ್ಟರ್ 5ರಲ್ಲಿ ನಡೆದಿದ್ದು, ಮನೆಯ ಹೊರಗಿನ ರಸ್ತೆಯಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ಎರಡು ವರ್ಷದ ಬಾಲಕಿ ಕಾರು ಹರಿದು ಮೃತಪಟ್ಟಿದೆ. ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ಬಾಲಕಿಯನ್ನು ಅಧಿರಾಜಾ ತಿವಾರಿ ಎಂದು ಗುರುತಿಸಲಾಗಿದ್ದು, ಆಕೆಯ ತಂದೆ ವೀರೇಂದ್ರ ತಿವಾರಿ ಐಟಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿದ್ದಾರೆ.
ಕುಟುಂಬದ ಪ್ರಕಾರ, ರಾತ್ರಿ ಸುಮಾರು 9 ಗಂಟೆ ವೇಳೆಗೆ ಅಧಿರಾಜಾ ಮನೆಯ ಹೊರಗಿನ ಲೇನ್ನಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಇದೇ ವೇಳೆ ನೆರೆಹೊರೆಯ ಯುವಕನೊಬ್ಬ ಚಲಾಯಿಸುತ್ತಿದ್ದ ಎನ್ನಲಾದ ಬಿಳಿ ಬಣ್ಣದ ಕಾರು ತಿರುವು ಪಡೆಯುವಾಗ ಬಾಲಕಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.
ಪಕ್ಕದ್ಮನೆಯವರ ಜೊತೆ ಹರಟೆ
ಇನ್ನು ಅಪಘಾತದ ವೇಳೆ ಮಗು ಮನೆಯವರು ಪಕ್ಕದ್ಮನೆಯವರ ಜೊತೆ ಮಾತನಾಡುತ್ತಾ ನಿಂತಿದ್ದರು. ಇದೇ ಸಂದರ್ಭದಲ್ಲೇ ಈ ಅಪಘಾತ ಸಂಭವಿಸಿದೆ. ಅಧಿರಾಜಾ ರಸ್ತೆಯಲ್ಲಿ ಆಟವಾಡುತ್ತಿರುವುದು ಹಾಗೂ ಸಮೀಪದಲ್ಲೇ ಆಕೆಯ ತಾಯಿ ಮತ್ತೊಬ್ಬ ಮಹಿಳೆಯೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ.
ಇದೇ ವೇಳೆ ಬಿಳಿ ಕಾರೊಂದು ಲೇನ್ಗೆ ತಿರುವು ಪಡೆದು ಬಂದು ಬಾಲಕಿಗೆ ಡಿಕ್ಕಿ ಹೊಡೆಯುವುದು ದೃಶ್ಯದಲ್ಲಿ ಸೆರೆಯಾಗಿದೆ. ಅಪಘಾತದ ಬಳಿಕ ಬಾಲಕಿಯ ತಾಯಿ ತಕ್ಷಣ ಓಡಿ ಬಂದು ಆಕೆಯನ್ನು ಎತ್ತಿಕೊಂಡಿದ್ದಾರೆ.
ಕಾರಿನಿಂದ ಚಾಲಕ ಕೂಡ ಕೆಳಗಿಳಿದಿದ್ದಾನೆ. ಸ್ಥಳದಲ್ಲಿ ಜನರು ಸೇರುತ್ತಿದ್ದಂತೆ ಚಾಲಕ ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕೆಲವೇ ಸೆಕೆಂಡ್ ಗಳಲ್ಲಿ ದುರಂತ
ತಂದೆ ವೀರೇಂದ್ರ ತಿವಾರಿ ನೀಡಿರುವ ಮಾಹಿತಿ ಪ್ರಕಾರ, ಇದೇ ಕಾರು ಸುಮಾರು ಐದು ನಿಮಿಷಗಳ ಹಿಂದೆ ಆ ರಸ್ತೆಯಲ್ಲಿ ಸಂಚರಿಸಿತ್ತು. ಆಗ ಚಾಲಕ ಮಕ್ಕಳನ್ನು ಗಮನಿಸಿ ಕಾರಿನ ವೇಗವನ್ನು ಕಡಿಮೆ ಮಾಡಿದ್ದ. ಆದರೆ ಕೆಲವೇ ನಿಮಿಷಗಳ ಬಳಿಕ ಮತ್ತೆ ಅದೇ ಕಾರು ಬಂದಿದ್ದು, ತಿರುವಿನಲ್ಲಿ ಚಾಲಕ ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದಾನೆ. ಈ ವೇಳೆ ಕಾರಿನ ಮುಂಭಾಗದ ಚಕ್ರ ಬಾಲಕಿಯ ಮೇಲೆ ಹರಿದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸಿಸಿಟಿವಿ ವಿಡಿಯೋ ವೈರಲ್
ಬಾಲಕಿಗೆ ಕಾರು ಢಿಕ್ಕಿಯಾದ ವಿಡಿಯೋ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಪೊಲೀಸರಿಗೆ ಮಾಹಿತಿ
ಕುಟುಂಬಸ್ಥರು ತಕ್ಷಣ ಬಾಲಕಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬಳಿಕ ಕುಟುಂಬಸ್ಥರು ಡಯಲ್-112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೆಕ್ಟರ್ 5 ಪೊಲೀಸ್ ಠಾಣೆಯ SHO ಸತ್ಯವಾನ್ ಮಾತನಾಡಿ, ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಸಂಬಂಧಿತ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿತ ಚಾಲಕನ ಬಂಧನಕ್ಕಾಗಿ ವಿವಿಧೆಡೆ ದಾಳಿ ನಡೆಸುತ್ತಿದ್ದಾರೆ.