ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ-ಇಸ್ಲಾಮಿಕ್ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್  online desk
ದೇಶ

ಅವರ ಎಲ್ಲಾ ಅಭಿಪ್ರಾಯಗಳನ್ನು ನಾನು ಒಪ್ಪುವುದಿಲ್ಲ- ಮಹಿಳೆಯರ ಬಗ್ಗೆ ಇಸ್ಲಾಮಿಕ್ ಧರ್ಮಗುರು ಹೇಳಿಕೆಗೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಪ್ರತಿಕ್ರಿಯೆ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೂ ತಾವು ಈ ವಿಷಯವನ್ನು ಪ್ರಸ್ತಾಪಿಸಿದ್ದಾಗಿ ಅವರು ಹೇಳಿದರು. "ನೀವು ಎಲ್ಲಾ ವಿದ್ವಾಂಸರ ಅಭಿಪ್ರಾಯಗಳನ್ನು ಒಪ್ಪಬೇಕೆಂದಿಲ್ಲ, ಹಾಗೆಯೇ ಎಲ್ಲಾ ಪ್ರಧಾನಿಗಳು ಅಥವಾ ಅಧ್ಯಕ್ಷರ ಅಭಿಪ್ರಾಯಗಳನ್ನೂ ಒಪ್ಪಬೇಕೆಂದಿಲ್ಲ," ಎಂದು ಅವರು ಹೇಳಿದರು.

ನವದೆಹಲಿ: ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಭಾರತಕ್ಕೆ ಭೇಟಿ ನೀಡಿದ್ದು, ಕೇರಳ ಮೂಲದ ಇಸ್ಲಾಮಿಕ್ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರನ್ನು ಕೋಝಿಕ್ಕೋಡ್‌ನಲ್ಲಿ ಭೇಟಿಯಾಗುವ ಕಾರ್ಯಕ್ರಮ ನಿಗದಿಯಾಗಿದೆ.

ಈ ಭೇಟಿಗೂ ಒಂದು ದಿನ ಮುಂಚಿತವಾಗಿ ಮಾತನಾಡಿರುವ ಅನ್ವರ್ ಇಬ್ರಾಹಿಂ, ಅಬೂಬಕರ್ ಮುಸ್ಲಿಯಾರ್ ಅವರ ಬಗ್ಗೆ ಮಾತನಾಡಿದ್ದು, ಕೇರಳದ ಇಸ್ಲಾಮಿಕ್ ಧರ್ಮಗುರುಗಳ ಎಲ್ಲಾ ಅಭಿಪ್ರಾಯಗಳನ್ನು ತಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಮಲೇಷ್ಯಾದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳಿವೆ ಎಂಬ ವಿಷಯವನ್ನು ಆ ಧರ್ಮಗುರುವಿಗೆ ನೇರವಾಗಿ ಹೇಳುವುದಾಗಿಯೂ ತಿಳಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಬ್ರಿಕ್ಸ್ (BRICS) ಶೃಂಗಸಭೆಯ ಸಂದರ್ಭದಲ್ಲಿ ಎನ್‌ಡಿಟಿವಿ (NDTV) ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅನ್ವರ್ ಇಬ್ರಾಹಿಂ, "ಮಹಿಳೆಯರು ತಮ್ಮ ಮನೆಗಳಲ್ಲೇ ಸೀಮಿತವಾಗಿರಬೇಕು" ಎಂಬ ಕಾಂತಪುರಂ ಅವರ ಇತ್ತೀಚಿನ ಹೇಳಿಕೆಯ ಕುರಿತು ಅವರನ್ನು ಪ್ರಶ್ನಿಸಲಾಯಿತು.

"ಅವರು ಧಾರ್ಮಿಕ ಗ್ರಂಥವಾದ ಕುರಾನ್, ಸಂಪ್ರದಾಯ ಮತ್ತು ಪ್ರವಾದಿಯವರ ಬೋಧನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಕೊಡುಗೆ ನೀಡಿರುವ ಸಾಂಪ್ರದಾಯಿಕ ಧಾರ್ಮಿಕ ವಿದ್ವಾಂಸರಾಗಿದ್ದಾರೆ; ಹಲವು ವಿಧಗಳಲ್ಲಿ ಅವರು ಶ್ರೇಷ್ಠ ಶಿಕ್ಷಕರಾಗಿದ್ದಾರೆ. ಆದರೆ ಅವರ ಎಲ್ಲಾ ಅಭಿಪ್ರಾಯಗಳನ್ನು ನಾವು ಖಂಡಿತವಾಗಿಯೂ ಒಪ್ಪುವುದಿಲ್ಲ," ಎಂದು ಅವರು ಹೇಳಿದರು.

ನಂತರ ಅವರು ಆ ಧರ್ಮಗುರು ನಡೆಸುತ್ತಿರುವ ನರ್ಸಿಂಗ್ ಕಾಲೇಜಿನಂತಹ ಸಂಸ್ಥೆಗಳನ್ನು ಉಲ್ಲೇಖಿಸಿ, ಅಂತಹ ಕಾಲೇಜಿನ ವಿದ್ಯಾರ್ಥಿನಿಯರು ಮುಂದೆ ಆಸ್ಪತ್ರೆಗಳಲ್ಲಿ ಕೆಲಸ ಮಾಡಲೇಬೇಕಾಗುತ್ತದೆ ಎಂದು ಪ್ರತಿಪಾದಿಸಿದರು. "ಒಟ್ಟಾರೆ ಸನ್ನಿವೇಶವನ್ನು ನೋಡಿದರೆ, ನನಗೇನೂ ಹೆಚ್ಚಿನ ಆತಂಕವಿಲ್ಲ. ಆದರೆ ಸಾರ್ವಜನಿಕವಾಗಿ ಯಾರಾದರೂ, ಅಥವಾ ಸ್ವತಃ ಅವರೇ ನನ್ನನ್ನು ಕೇಳಿದರೂ, 'ಇಲ್ಲ, ಮಲೇಷ್ಯಾದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳಿವೆ' ಎಂದು ನಾನು ಹೇಳುತ್ತೇನೆ," ಎಂದ ಅವರು, "ನಮ್ಮ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ವಿದ್ಯಾರ್ಥಿನಿಯರಿದ್ದಾರೆ. ನನ್ನ ಪತ್ನಿ ವೈದ್ಯೆಯಾಗಿದ್ದಾರೆ. ನನ್ನ ಎಲ್ಲಾ ಮಕ್ಕಳಿಗೆ - ಹೆಣ್ಣುಮಕ್ಕಳೂ ಸೇರಿದಂತೆ - ಅಧ್ಯಯನ ಮಾಡಲು ಮತ್ತು ಸ್ವಾತಂತ್ರ್ಯವನ್ನು ಅನುಭವಿಸಲು ಸಂಪೂರ್ಣ ಅವಕಾಶಗಳನ್ನು ನೀಡಲಾಗಿದೆ," ಎಂದು ಸೇರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೂ ತಾವು ಈ ವಿಷಯವನ್ನು ಪ್ರಸ್ತಾಪಿಸಿದ್ದಾಗಿ ಅವರು ಹೇಳಿದರು. "ನೀವು ಎಲ್ಲಾ ವಿದ್ವಾಂಸರ ಅಭಿಪ್ರಾಯಗಳನ್ನು ಒಪ್ಪಬೇಕೆಂದಿಲ್ಲ, ಹಾಗೆಯೇ ಎಲ್ಲಾ ಪ್ರಧಾನಿಗಳು ಅಥವಾ ಅಧ್ಯಕ್ಷರ ಅಭಿಪ್ರಾಯಗಳನ್ನೂ ಒಪ್ಪಬೇಕೆಂದಿಲ್ಲ," ಎಂದು ಅವರು ಹೇಳಿದರು.

ಮಲೇಷ್ಯಾದಲ್ಲಿರುವ ಭಾರತೀಯ ಸಮುದಾಯದ (ಡಯಾಸ್ಪೊರಾ) ದೃಷ್ಟಿಯಿಂದ ದಕ್ಷಿಣ ಭಾರತದ ಮಹತ್ವವನ್ನು ಅವರು ಒತ್ತಿಹೇಳಿದರು ಮತ್ತು ತಮಿಳುನಾಡಿಗೆ ಭೇಟಿ ನೀಡುವ ಇಚ್ಛೆಯನ್ನೂ ವ್ಯಕ್ತಪಡಿಸಿದರು. "ಆದರೆ ಮುಖ್ಯಮಂತ್ರಿ ವಿಜಯ್ ಅವರು ವಿದೇಶದಲ್ಲಿರುವುದರಿಂದ, ಆ ಭೇಟಿಯನ್ನು ಮುಂದೂಡಿ ಕೇರಳದತ್ತ ಗಮನಹರಿಸಲು ನಿರ್ಧರಿಸಿದೆ," ಎಂದು ಅವರು ತಿಳಿಸಿದರು.

ಕಳೆದ ತಿಂಗಳು ಕೊಚ್ಚಿಯಲ್ಲಿ ನಡೆದ ಇಸ್ಲಾಮಿಕ್ ಸಮ್ಮೇಳನವೊಂದರಲ್ಲಿ ಮಾತನಾಡಿದ್ದ 'ಆಲ್ ಇಂಡಿಯಾ ಸುನ್ನಿ ಜಮೀಯತುಲ್ ಉಲಮಾ'ದ ಪ್ರಧಾನ ಕಾರ್ಯದರ್ಶಿ ಕಾಂತಪುರಂ, ಮಹಿಳೆಯರು ಮನೆಗಳಲ್ಲೇ ಸೀಮಿತವಾಗಿರಬೇಕು ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು ಎಂದು ಕುರಾನ್ ಹೇಳುತ್ತದೆ ಎಂದು ಪ್ರತಿಪಾದಿಸಿದ್ದರು. ಮಹಿಳೆಯರನ್ನು ಸಾರ್ವಜನಿಕ ವೇದಿಕೆಗಳಿಗೆ ಕರೆತರುವುದು "ದೊಡ್ಡ ವಿನಾಶ"ಕ್ಕೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ಇಸ್ಲಾಂ 'ಪರ್ದಾ' ಪದ್ಧತಿಯನ್ನು ಕಡ್ಡಾಯಗೊಳಿಸಿದೆ ಎಂದೂ ಅವರು ಹೇಳಿದ್ದರು. ಮಹಿಳೆಯರು ಪುರುಷರೊಂದಿಗೆ ವೇದಿಕೆ ಹಂಚಿಕೊಳ್ಳುವುದನ್ನು ನಿಷೇಧಿಸುವ 'ಸಮಸ್ತ' ಸಂಘಟನೆಯ ಸುತ್ತೋಲೆಯ ಬೆನ್ನಲ್ಲೇ ಈ ಹೇಳಿಕೆಗಳು ಹೊರಬಂದಿದ್ದವು.

ಈ ನಿಲುವು 19ನೇ ಶತಮಾನಕ್ಕೆ ಸೇರಿದ್ದು ಮತ್ತು ಇದು ಇಸ್ಲಾಂ ಧರ್ಮದ ತಪ್ಪು ತಿಳುವಳಿಕೆಯಾಗಿದೆ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಹೇಳಿದ್ದರು. ತಾವು ಮತ್ತು ತಮ್ಮೊಂದಿಗಿರುವವರು ಮಹಿಳೆಯರನ್ನು ಮನೆಯೊಳಗೇ ಸೀಮಿತವಾಗಿರಿಸಬೇಕು ಎಂದು ನಂಬುವವರಲ್ಲ ಎಂದು ಕಾಂತಪುರಂ ನಂತರ ಸ್ಪಷ್ಟನೆ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ನಾವು ಕೈ ಜೋಡಿಸೋಣ": ಗಲ್ವಾನ್ ಸಂಘರ್ಷದ ಬಳಿಕ ಮೊದಲ ಮಾತುಕತೆ ವೇಳೆ Narendra Modi ಗೆ Xi Jinping ಸಂದೇಶ; ಭಾರತದೆದುರು ಮಂಡಿಯೂರಿದ ಚೀನಾ?

ಮೈಸೂರಿನ 'ಪೇಟೆ ರೌಡಿ' ಪೊಲೀಸ್ ಠಾಣೆಗೆ ನುಗ್ಗಿದ್ರೆ ನಾನು ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುತ್ತೇನೆ: ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನ್

ಬ್ರಿಕ್ಸ್‌ನಲ್ಲಿ ಪಹಲ್ಗಾಮ್ ದಾಳಿ ಬಗ್ಗೆ ಮಾತ್ರ ಖಂಡನೆ: ಗಾಜಾ ಬಗ್ಗೆ ಮೌನ ಏಕೆ?; ಗೋಳಾಡಿದ ಮೊಹಬೂಬಾ ಮುಫ್ತಿ!

ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿದ BRICS; ಭಾರತಕ್ಕೆ ಅತಿ ದೊಡ್ಡ ರಾಜತಾಂತ್ರಿಕ ಗೆಲುವು!

ದೆಹಲಿಯ ಪ್ರತಿಷ್ಠಿತ ಫೈವ್-ಸ್ಟಾರ್ ಹೋಟೆಲ್​ನಲ್ಲಿ ಪೈಲಟ್ ಶವವಾಗಿ ಪತ್ತೆ; ಕಾರಣ ನಿಗೂಢ!