ವಿಜಯ್ ಮಲ್ಯ 
ದೇಶ

'ನಾಚಿಕೆಯಾಗಬೇಕು, ವಿಚಾರಣೆಯಿಲ್ಲದೆ ಚಾರಿತ್ರ್ಯಹರಣ ಮಾಡಿ ಬಡಾಯಿ ಕೊಚ್ಚಿಕೊಳ್ಳುವುದು ಸಾಧನೆಯೇ?': ED ವಿರುದ್ಧ ಮಲ್ಯ ಕಿಡಿ!

ಸತ್ಯವನ್ನು ತಿಳಿಯಬಯಸುವವರಿಗಾಗಿ, ವಂಚನೆಯಲ್ಲಿ ನಿಪುಣರಾದ ಸಿಬಿಐ (CBI) ಮತ್ತು ಇಡಿ (ED) ಹೆಣೆದಿರುವ ಎಲ್ಲ ಸುಳ್ಳುಗಳು ಮತ್ತು ಆಧಾರರಹಿತ ಆರೋಪಗಳನ್ನು ನಾನು ಹಂತ ಹಂತವಾಗಿ ಬಯಲು ಮಾಡುತ್ತೇನೆ ಎಂದಿದ್ದಾರೆ.

ಉದ್ಯಮಿ ವಿಜಯ್ ಮಲ್ಯ ಅವರು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಈ ಎರಡೂ ತನಿಖಾ ಸಂಸ್ಥೆಗಳು ತಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ನಿರ್ಮಿಸಿವೆ ಮತ್ತು ವಿಚಾರಣೆಗೆ ಮುನ್ನ ಸಾರ್ವಜನಿಕವಾಗಿ ಖ್ಯಾತಿಗೆ ಹಾನಿ ಮಾಡಿವೆ ಎಂದು ಆರೋಪಿಸಿದ್ದಾರೆ.

X ನಲ್ಲಿನ ಸರಣಿ ಪೋಸ್ಟ್‌ಗಳಲ್ಲಿ ಮಲ್ಯ, ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸಂಬಂಧಿಸಿದ ತನಿಖೆಗಳನ್ನು ಪ್ರಶ್ನಿಸಿದ್ದಾರೆ ಮತ್ತು ಅಧಿಕಾರಿಗಳು ಈಗಾಗಲೇ ತಮ್ಮಿಂದ ₹14,000 ಕೋಟಿಗೂ ಹೆಚ್ಚಿನ ಮೌಲ್ಯದ ಹಣ ಅಥವಾ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಏಜೆನ್ಸಿಗಳು ಹೊರಿಸಿರುವ ಸುಳ್ಳು ಆರೋಪಗಳಿಗೆ ಸಂಬಂಧಿಸಿದಂತೆ ಕ್ರಮೇಣ ವಿಷಯಗಳನ್ನು ಬಹಿರಂಗಪಡಿಸುವುದಾಗಿಯೂ ಅವರು ಹೇಳಿದರು.

ತಮ್ಮ ಇತ್ತೀಚಿನ ಹೇಳಿಕೆಗಳು ಕೇವಲ 'ಆಕ್ರೋಶದ ನುಡಿಗಳು' (rant) ಎಂಬ ಅಭಿಪ್ರಾಯವನ್ನು ಮಲ್ಯ ತಳ್ಳಿಹಾಕಿದರು ಮತ್ತು ತಾವು ಸತ್ಯಾಂಶಗಳನ್ನು ಸಾರ್ವಜನಿಕರ ಮುಂದಿಡುತ್ತಿದ್ದೇನೆ ಎಂದು ಪ್ರತಿಪಾದಿಸಿದರು.

'ನನ್ನ ಮಾಧ್ಯಮ ಮಿತ್ರರೇ - ಇದೊಂದು 'ಆಕ್ರೋಶದ ನುಡಿ'ಯಲ್ಲ. ಇವು ನೀವು ಸರಿಯಾಗಿ ವರದಿ ಮಾಡಲು ಇಚ್ಛಿಸದ ಸತ್ಯಾಂಶಗಳು. ನೀವು ನನ್ನನ್ನು ಪ್ರೀತಿಸಿ, ದ್ವೇಷಿಸಿ, ನಿಂದಿಸಿ (ಅನೇಕರು ಹಾಗೆಯೇ ಮಾಡುತ್ತಾರೆ) ಅಥವಾ ನಿರ್ಲಕ್ಷಿಸಿ - ಏನೇ ಆದರೂ ನಾನು ಬದಲಾಗುವುದಿಲ್ಲ. ದೇವರು ನನಗೆ ಧೈರ್ಯ ಮತ್ತು ಶಕ್ತಿಯನ್ನು ನೀಡಿದ್ದಾನೆ; ಅದಕ್ಕಿಂತ ಮುಖ್ಯವಾಗಿ, ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎಂಬುದನ್ನು ನನಗೆ ಕಲಿಸಿದ್ದಾನೆ. ನಾನು ಪೂಜಿಸುತ್ತಿದ್ದ ಪವಿತ್ರ ದೇವಾಲಯಗಳಿಗೆ ಭೇಟಿ ನೀಡಲು ಸಾಧ್ಯವಾಗದಿರುವುದರ ಬಗ್ಗೆ ನನಗೆ ತೀವ್ರ ಕೊರಗಿದ್ದರೂ, ನಾನು ಈಗಲೂ ಆಳವಾದ ಧಾರ್ಮಿಕ ನಂಬಿಕೆಯನ್ನು ಹೊಂದಿದ್ದೇನೆ' ಎಂದು ಬರೆದಿದ್ದಾರೆ.

ವಿಚಾರಣೆಯಿಲ್ಲದೆಯೇ ಸಾರ್ವಜನಿಕವಾಗಿ ವ್ಯಕ್ತಿಗಳ ಬಗ್ಗೆ ಪೂರ್ವನಿರ್ಧಾರಿತ ತೀರ್ಮಾನಕ್ಕೆ ಬರುವ ತನಿಖಾ ಸಂಸ್ಥೆಯ ಕ್ರಮವನ್ನು ಟೀಕಿಸಲು ಮಲ್ಯ ಅವರು ಜಾರಿ ನಿರ್ದೇಶನಾಲಯದ (ED) ಎರಡು ಪ್ರಕಟಣೆಗಳನ್ನು ಸಹ ಪೋಸ್ಟ್ ಮಾಡಿದ್ದು, ಒಂದು ಇಂದೋರ್‌ನಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆಸ್ತಿ ಜಪ್ತಿಗೆ ಸಂಬಂಧಿಸಿದ್ದು, ಇನ್ನೊಂದು ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳಲ್ಲಿ ನಡೆಸಲಾದ ಶೋಧ ಮತ್ತು ಜಪ್ತಿ ಕಾರ್ಯಾಚರಣೆಗೆ ಸಂಬಂಧಿಸಿದ್ದಾಗಿದೆ.

'ಇದು ನಾಚಿಕೆಗೇಡಿನ ಸಂಗತಿ. ನ್ಯಾಯಯುತ ವಿಚಾರಣೆಯಿಲ್ಲದೆ ಜಗತ್ತಿನ ಯಾವ ದೇಶದಲ್ಲಿ ಜಾರಿ ಸಂಸ್ಥೆಯೊಂದು ಈ ರೀತಿ ಬಡಾಯಿ ಕೊಚ್ಚಿಕೊಳ್ಳುತ್ತದೆ? ಜಾರಿ ನಿರ್ದೇಶನಾಲಯ ಹೀಗೆ ಮಾಡುತ್ತಿದೆ. ಯಾವುದೇ ದೋಷಾರೋಪ ಪಟ್ಟಿ ಇಲ್ಲ, ವಿಚಾರಣೆ ಇಲ್ಲ; ಕೇವಲ ಸಾರ್ವಜನಿಕವಾಗಿ ವ್ಯಕ್ತಿಯ ಚಾರಿತ್ರ್ಯ ಹರಣ ಮಾಡಲಾಗುತ್ತಿದೆ. ಬೇರೆ ಯಾವುದೇ ದೇಶದಲ್ಲಿ ಹೀಗೆ ನಡೆಯುವುದಿಲ್ಲ. ದಯವಿಟ್ಟು ನೀವೇ ಯೋಚಿಸಿ' ಎಂದು ಅವರು ಹೇಳಿದರು.

'ಸತ್ಯವನ್ನು ತಿಳಿಯಬಯಸುವವರಿಗಾಗಿ, ವಂಚನೆಯಲ್ಲಿ ನಿಪುಣರಾದ ಸಿಬಿಐ (CBI) ಮತ್ತು ಇಡಿ (ED) ಹೆಣೆದಿರುವ ಎಲ್ಲ ಸುಳ್ಳುಗಳು ಮತ್ತು ಆಧಾರರಹಿತ ಆರೋಪಗಳನ್ನು ನಾನು ಹಂತ ಹಂತವಾಗಿ ಬಯಲು ಮಾಡುತ್ತೇನೆ. ನಾನು ದೃಢವಾಗಿ ಮತ್ತು ತಾಳ್ಮೆಯಿಂದ ನಿಂತಿದ್ದೇನೆ ಹಾಗೂ ಮುಂದೆಯೂ ಹಾಗೆಯೇ ಮುಂದುವರಿಯುತ್ತೇನೆ. ಏಕೆಂದರೆ ಸುಳ್ಳಿನ ಮುಂದೆ 'ಶರಣಾಗುವುದರಲ್ಲಿ' ನನಗೆ ನಂಬಿಕೆಯಿಲ್ಲ. ಆದರೆ, ಈ ಸಂಸ್ಥೆಗಳಿಂದ ಅನ್ಯಾಯವಾಗಿ ಗುರಿಯಾಗಿರುವ ಇತರ ಸಂತ್ರಸ್ತರ ಬಗ್ಗೆ ನನಗೆ ಸಹಾನುಭೂತಿಯಿದೆ. ಇವರು ಏನು ಮಾಡುತ್ತಾರೆ ಎಂಬುದು ಸಾರ್ವಜನಿಕರಿಗೆ ತಿಳಿದಿರುವ ವಿಷಯವೇ ಆಗಿದೆ' ಎಂದು ಮಲ್ಯ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ನಾವು ಕೈ ಜೋಡಿಸೋಣ": ಗಲ್ವಾನ್ ಸಂಘರ್ಷದ ಬಳಿಕ ಮೊದಲ ಮಾತುಕತೆ ವೇಳೆ Narendra Modi ಗೆ Xi Jinping ಸಂದೇಶ; ಭಾರತದೆದುರು ಮಂಡಿಯೂರಿದ ಚೀನಾ?

ಪ್ರಶ್ನೆ ಪತ್ರಿಕೆ ಸೋರಿಕೆ ಸಹಿಸಲ್ಲ: KPSC ವಿರುದ್ಧ ಹೋರಾಟಕ್ಕೆ CJP ಎಂಟ್ರಿ: ನೊಂದ ಅಭ್ಯರ್ಥಿಗಳಿಗೆ ನ್ಯಾಯದ ಭರವಸೆ

ಮೈಸೂರಿನ 'ಪೇಟೆ ರೌಡಿ' ಪೊಲೀಸ್ ಠಾಣೆಗೆ ನುಗ್ಗಿದ್ರೆ ನಾನು ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುತ್ತೇನೆ: ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನ್

ಚೀನಾ ಇದ್ದರೂ ಬ್ರಿಕ್ಸ್‌ ಸದಸ್ಯತ್ವಕ್ಕಾಗಿ 3 ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ರೂ ಅವಕಾಶ ಸಿಕ್ಕಿಲ್ಲ: ಪಾಕ್ ಗೋಳಾಟ!

ಬಳ್ಳಾರಿ ನಂತರ ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಪಾದಯಾತ್ರೆ ಘೋಷಿಸಿದ ಬಿಜೆಪಿ; ಸೆ. 15 ರಿಂದ ರಾಜ್ಯಾದ್ಯಂತ ಹೋರಾಟ