ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ 76ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ನಾಯಕರು ಅವರಿಗೆ ಶುಭಾಶಯ ಕೋರಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ನಾಯಕರು ತಮ್ಮ ಶುಭಾಶಯ ಸಂದೇಶಗಳಲ್ಲಿ ಮೋದಿಯವರನ್ನು ‘ವಿಶ್ವದ ಅತ್ಯಂತ ಜನಪ್ರಿಯ ನಾಯಕ’ ಎಂದು ಬಣ್ಣಿಸಿದ್ದಾರೆ. ಕೆಲವರು ಅವರನ್ನು ‘ನವ ಭಾರತದ ಶಿಲ್ಪಿ’ ಎಂದೂ ಕರೆದಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಮೋದಿಗೆ ಹೃದಯಪೂರ್ವಕ ಜನ್ಮದಿನದ ಶುಭಾಶಯ ಕೋರಿದ್ದು, ಅವರ ನಾಯಕತ್ವ, ಸಾರ್ವಜನಿಕ ಸೇವೆಯ ಬದ್ಧತೆ ಹಾಗೂ ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
‘ಒಂದು ಭಾರತ-ಶ್ರೇಷ್ಠ ಭಾರತ’ದ ದೃಷ್ಟಿಕೋನ ಹೊಂದಿರುವ ಹಾಗೂ ‘ನವ ಭಾರತದ ಶಿಲ್ಪಿ’ಯಾದ ಮೋದಿಯವರು ದೇಶದ ಜನರ ಜೀವನದಲ್ಲಿ ಸಂತೋಷ, ಸಮೃದ್ಧಿ, ಭದ್ರತೆ ಮತ್ತು ಹೆಮ್ಮೆಯ ಹೊಸ ಯುಗವನ್ನು ತರಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ಮೋದಿಯವರ ನಾಯಕತ್ವದ ಪ್ರಮುಖ ಗುಣವೆಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿ ಸದಾ ಆಡಳಿತದ ಕೇಂದ್ರದಲ್ಲಿರುವುದು ಎಂದು ಹೇಳಿದ್ದಾರೆ.
ತಾಯಿ ನೀಡುವ ಆಶೀರ್ವಾದದಿಂದ ಹಿಡಿದು ಆಯುಷ್ಮಾನ್ ಕಾರ್ಡ್ನಿಂದ ಕುಟುಂಬಕ್ಕೆ ನೆರವಾದ ಬಗ್ಗೆ ಮಹಿಳೆಯೊಬ್ಬರು ಹಂಚಿಕೊಳ್ಳುವ ಅನುಭವದವರೆಗೆ, ಸರ್ಕಾರದ ಯೋಜನೆಗಳ ನಿಜವಾದ ಅರ್ಥ ಜನರ ಬದುಕಿನಲ್ಲಿನ ಬದಲಾವಣೆಯಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ತ್ರಿವಳಿ ತಲಾಖ್ನಿಂದ ಮುಕ್ತಿ, ನಾರಿ ಶಕ್ತಿ ವಂದನ ಅಧಿನಿಯಮದಂತಹ ಕ್ರಮಗಳು ಮಹಿಳೆಯರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿವೆ. ಸ್ಟಾರ್ಟ್ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಹಾಗೂ ಹೊಸ ಶಿಕ್ಷಣ ನೀತಿ ಯುವಜನರಿಗೆ ಅವಕಾಶಗಳ ಬಾಗಿಲು ತೆರೆದಿವೆ ಎಂದು ಹೇಳಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದು, ಉತ್ತಮ ಆರೋಗ್ಯ, ಯಶಸ್ಸು ಹಾಗೂ ಇನ್ನೂ ಹಲವು ವರ್ಷಗಳ ಕಾಲ ಜನರ ಸೇವೆ ಮಾಡುವ ಅವಕಾಶ ಸಿಗಲಿ ಎಂದು ಹಾರೈಸಿದ್ದಾರೆ.
ಮೋದಿಯವರ ಆಲೋಚನೆಗಳು ಮತ್ತು ಸಾಧನೆಗಳು ಜಾಗತಿಕ ಮಟ್ಟದಲ್ಲಿ ಸ್ಫೂರ್ತಿ ನೀಡುತ್ತಿವೆ ಎಂದು ಜೈಶಂಕರ್ ಹೇಳಿದ್ದಾರೆ.