ಉಜ್ಜಯಿನಿ: 'ಧರ್ಮ'ವನ್ನು ಕೇವಲ "ವೃದ್ಧರಿಗೆ ಸಂಬಂಧಿಸಿದ ವಿಷಯ" ಎಂದು ಕೆಲವರು ಭಾವಿಸಿರುವ ಇಂದಿನ ಕಾಲದಲ್ಲಿ, ಯುವಜನರು (ಜೆನ್ ಝೆಡ್) ಅದರ ಬಗ್ಗೆ ಚರ್ಚಿಸುತ್ತಿರುವುದನ್ನು ಕಂಡು ತಮಗೆ ಸಂತೋಷವಾಗಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ ಹೇಳಿದರು.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ 'ಯುವ ಧರ್ಮ ಸಂಸತ್'ನಲ್ಲಿ ಸುಮಾರು 1,700 ಯುವ ವಿದ್ಯಾರ್ಥಿಗಳು ಅಥವಾ 'ಜೆನ್ ಝೆಡ್' ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ಧರ್ಮವು ನಮ್ಮ ಡಿಎನ್ಎ ಮತ್ತು ನಡವಳಿಕೆಯಲ್ಲಿ ಹಾಸುಹೊಕ್ಕಾಗಿದ್ದು, ನಮ್ಮ ಕಾರ್ಯಗಳಿಗೆ ಮಾರ್ಗದರ್ಶನ ನೀಡುತ್ತದೆ ಎಂದು ಪ್ರತಿಪಾದಿಸಿದರು.
'ಧರ್ಮ'ವನ್ನು ಮತ-ಪಂಥಗಳಿಗಿಂತಲೂ ಮಿಗಿಲಾದದ್ದು ಎಂದು ಬಣ್ಣಿಸಿದ ಅವರು; ಮತ-ಪಂಥಗಳು ಮನುಷ್ಯನನ್ನು ಬಂಧಿಸಿದರೆ, ಧರ್ಮವು ಮುಕ್ತಿಯತ್ತ ಕೊಂಡೊಯ್ಯುತ್ತದೆ ಎಂದು ಹೇಳಿದರು.
'ಧರ್ಮ'ವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಬಯಸುವವರು ತಮ್ಮ ಪೂರ್ವಗ್ರಹಪೀಡಿತ ಅಭಿಪ್ರಾಯಗಳನ್ನು ಬದಿಗಿರಿಸಬೇಕು ಎಂದು ಹೇಳಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥರು, ಯುವಜನರು ಅಂತಹ ಪೂರ್ವಗ್ರಹಗಳನ್ನು ತೊರೆಯಬೇಕು. ಅಧರ್ಮವು ಅರಣ್ಯನಾಶಕ್ಕೆ ಕಾರಣವಾಗಿದೆ ಮತ್ತು ಮಾನವ ಅಸ್ತಿತ್ವಕ್ಕೆ ಬೆದರಿಕೆಯೊಡ್ಡಿದೆ ಎಂದರು.
ಯುವ ಧರ್ಮ ಸಂಸತ್ನಲ್ಲಿ ಸುಮಾರು 300 ವಿದ್ವಾಂಸರು, ಶಿಕ್ಷಕರು, ಸಂಶೋಧಕರು ಮತ್ತು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸೆಪ್ಟೆಂಬರ್ 19 ರಂದು ನಡೆಯಲಿರುವ ಸಮಾರೋಪ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.
ಆಯೋಜಕರ ಪ್ರಕಾರ, ಕಾಶಿ, ಅಯೋಧ್ಯೆ, ಮಥುರಾ, ಹರಿದ್ವಾರ ಮತ್ತು ಕಾಂಚೀಪುರದಲ್ಲಿ ನಡೆದ ಕಾರ್ಯಕ್ರಮಗಳ ನಂತರ ಇದು 'ಯುವ ಧರ್ಮ ಸಂಸತ್'ನ ಆರನೇ ಆವೃತ್ತಿಯಾಗಿದೆ. ಮುಂದಿನ ವರ್ಷ ಈ ಕಾರ್ಯಕ್ರಮವು ದ್ವಾರಕಾದಲ್ಲಿ ನಡೆಯಲಿದೆ.