ನಂದನ್ ನಿಲೇಕಣಿ 
ದೇಶ

NEET reforms: ನಂದನ್ ನಿಲೇಕಣಿ ನೇತೃತ್ವದ ಸಮಿತಿ ತಿಂಗಳಾಂತ್ಯದೊಳಗೆ ಮೊದಲ ವರದಿ ಸಲ್ಲಿಸಲಿದೆ: 'ಸುಪ್ರೀಂ'ಗೆ ಕೇಂದ್ರದ ಮಾಹಿತಿ

ಈವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವಂತೆ ಪೀಠವು ನೀಲೇಕಣಿ ಸಮಿತಿಗೆ ನೆರವಾಗುತ್ತಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (DoPT) ಜಂಟಿ ಕಾರ್ಯದರ್ಶಿಗೆ ಸೂಚಿಸಿತು.

ನವದೆಹಲಿ: ನೀಟ್ (NEET) ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸುವ ಮತ್ತು ಸುಧಾರಣೆ ಮಾಡುವ ಉದ್ದೇಶದಿಂದ ಉದ್ಯಮಿ ನಂದನ್ ನಿಲೇಕಣಿ ನೇತೃತ್ವದಲ್ಲಿ 'ಉನ್ನತ ಮಟ್ಟದ ಕಾರ್ಯಪಡೆ'ಯನ್ನು ರಚಿಸಲಾಗಿದೆ. ಈ ಸಮಿತಿಯು ವ್ಯಾಪಕ ಸಮಾಲೋಚನೆಗಳನ್ನು ನಡೆಸಿದ್ದು, ಈ ತಿಂಗಳ ಅಂತ್ಯದ ವೇಳೆಗೆ ತನ್ನ ಮೊದಲ ಮಧ್ಯಂತರ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

'ಸ್ವೀಕರಿಸಲಾದ ಎಲ್ಲ ಸಲಹೆಗಳು ಮತ್ತು ಪ್ರಸ್ತಾವನೆಗಳನ್ನು ಪರಿಶೀಲನೆಗಾಗಿ ಸಮಿತಿಗೆ ನೀಡಲಾಗಿದೆ. ಇಸ್ರೋ (ISRO) ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ಅವರ ನೇತೃತ್ವದ ಹಿಂದಿನ ಸಮಿತಿ ಸದಸ್ಯರೊಂದಿಗೂ ಈ ಸಮಿತಿಯು ಚರ್ಚಿಸಿದೆ ಎಂದು ಸರ್ಕಾರದ ಹಿರಿಯ ವಕೀಲರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠಕ್ಕೆ ತಿಳಿಸಿದರು.

ಈವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವಂತೆ ಪೀಠವು ನೀಲೇಕಣಿ ಸಮಿತಿಗೆ ನೆರವಾಗುತ್ತಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (DoPT) ಜಂಟಿ ಕಾರ್ಯದರ್ಶಿಗೆ ಸೂಚಿಸಿತು.

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET) ನಡೆಸುವ ಸಂಪೂರ್ಣ ಪ್ರಕ್ರಿಯೆಯನ್ನು ಸಾಂಸ್ಥಿಕಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಗಮನಹರಿಸಬೇಕೆಂಬುದೇ ಈ ವಿಷಯದಲ್ಲಿ ಅತ್ಯಂತ ಪ್ರಮುಖವಾದ ಅಂಶವಾಗಿದೆ ಎಂದು ಪೀಠವು ಮೆಹ್ತಾ ಅವರಿಗೆ ತಿಳಿಸಿತು.

'ಸಂಪೂರ್ಣ ವ್ಯವಸ್ಥೆಯ ಸ್ಥಿರತೆಯೇ ಅತ್ಯಂತ ಮುಖ್ಯ ಎಂಬುದನ್ನು ನೀವು ಅರಿಯಬೇಕು. ಇಲ್ಲಿ ಶಾಶ್ವತ ವ್ಯವಸ್ಥೆ, ಶಾಶ್ವತ ಸಿಬ್ಬಂದಿ ಮತ್ತು ಶಾಶ್ವತ ವಿಭಾಗಗಳು ಇರಬೇಕು. ನಿಯೋಜನೆ ಮೂಲಕದ ನೇಮಕಾತಿಗಳು ಅತ್ಯಂತ ಕಡಿಮೆ ಇರಬೇಕು. ಆಗ ಮಾತ್ರ ಒಂದು ಶಾಶ್ವತ ಸ್ವರೂಪದ ವ್ಯವಸ್ಥೆ ರೂಪುಗೊಳ್ಳಲು ಸಾಧ್ಯ' ಎಂದು ನ್ಯಾಯಪೀಠ ಮೆಹ್ತಾ ಅವರಿಗೆ ಹೇಳಿತು.

ಎನ್‌ಟಿಎ (NTA)ಯ ನೂತನ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪರಿಶೀಲಿಸಲು, ಅದರ ಹೊಸದಾಗಿ ಮೇಲ್ದರ್ಜೆಗೇರಿಸಲಾದ ಕೇಂದ್ರ ಅಥವಾ ಸೌಲಭ್ಯಕ್ಕೆ ತಾವೂ ಹಾಗೂ ನ್ಯಾಯಮೂರ್ತಿ ಅರಾಧೆ ಅವರೂ ಖುದ್ದಾಗಿ ಭೇಟಿ ನೀಡಿ ವೀಕ್ಷಿಸಲು ಬಯಸುವುದಾಗಿ ನ್ಯಾಯಮೂರ್ತಿ ನರಸಿಂಹ ಹೇಳಿದರು.

ಶಿಕ್ಷಣ ಇಲಾಖೆಯು ಹೊಸ ಹಾಗೂ ಉನ್ನತೀಕರಿಸಿದ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದೆ.

'ಈ ರಚನೆಯ ಶಾಶ್ವತತೆಯನ್ನು ಖಚಿತಪಡಿಸಲಾಗಿದೆ. ಆದಾಗ್ಯೂ, ಸದ್ಯಕ್ಕೆ ಮಾನವ ಸಂಪನ್ಮೂಲದ ಲಭ್ಯತೆಯನ್ನು ಭಾಗಶಃ ಮಾತ್ರ ಖಚಿತಪಡಿಸಿಕೊಳ್ಳಲಾಗಿದೆ' ಎಂದು ಮೆಹ್ತಾ ಹೇಳಿದರು.

NTAಯಲ್ಲಿನ ಸುಧಾರಣೆಗಳನ್ನು ಸಾಂಸ್ಥಿಕಗೊಳಿಸುವ ಅಗತ್ಯವನ್ನು ಗಮನಿಸಿದ ಸುಪ್ರೀಂ ಕೋರ್ಟ್, ಆಗಸ್ಟ್ 19 ರಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನವೊಂದನ್ನು ನೀಡಿತು. ರಾಧಾಕೃಷ್ಣನ್ ಸಮಿತಿ ಮತ್ತು ನಿಲೇಕಣಿ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ಕೈಗೊಂಡ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

'ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್' (FAIMA) ಪರವಾಗಿ ವಕೀಲೆ ತನ್ವಿ ದುಬೆ ಅವರು ಸಲ್ಲಿಸಿದ್ದ ಅರ್ಜಿಯನ್ನೂ ಒಳಗೊಂಡಂತೆ, ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMC ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಆದೇಶಕ್ಕೆ ತೀವ್ರ ಆಕ್ರೋಶ; 'ಪ್ರತಿಭಟನೆಯೊಂದಿಗೆ' ಹೊಸ ಹೆಸರು, ಚಿಹ್ನೆ ಸಲ್ಲಿಸಿದ ಮಮತಾ ಬ್ಯಾನರ್ಜಿ!

TMC ಹೆಸರು, ಚಿಹ್ನೆ ಮುಟ್ಟುಗೋಲು: 'Vote chori, govt chori ಆಯ್ತು, ಈಗ ಪಾರ್ಟಿ ಚೋರಿ': ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಕಿಡಿ

ದಿಗ್ಬಂಧನ ಉಲ್ಲಂಘಿಸಿದ ಟ್ಯಾಂಕರ್‌ ಮೇಲೆ Iran ಭೀಕರ ದಾಳಿ: ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿದ ಹಡಗು, Hormuz ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ..!

TMC ಪಕ್ಷದ ಹೆಸರು, ಚಿಹ್ನೆ ಫ್ರೀಜ್ ಮಾಡಿದ ಚುನಾವಣಾ ಆಯೋಗ: ಉಪಚುನಾವಣೆ ಹೊತ್ತಲ್ಲೇ ದೀದಿಗೆ ಶಾಕ್‌, ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ..!

ಸ್ಥಳೀಯ ಚುನಾವಣೆಗಳಿಗೆ ಕಾಂಗ್ರೆಸ್‌ ರಣತಂತ್ರ: ಜಿಲ್ಲಾಧ್ಯಕ್ಷರ ಕಾರ್ಯಕ್ಷಮತೆ ಮೇಲೆ ಹೈಕಮಾಂಡ್‌ ಕಣ್ಣು, ಬೂತ್‌ನಿಂದ ಜಿಲ್ಲಾ ಮಟ್ಟದವರೆಗೆ ಸಂಘಟನೆಗೆ ಸೂಚನೆ..!