ರಾಹುಲ್ ಗಾಂಧಿ ಅವರ ಯುವಜನರೊಂದಿಗೆ ಸಂವಾದ ಕಾರ್ಯಕ್ರಮ ಛಾತ್ರೋಂ ಕಿ ಗೂಂಜ್’ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದೇಶಿ ನಾಯಕರೊಂದಿಗೆ ಮಾತನಾಡುವ ಶೈಲಿಯನ್ನು ಹಾಸ್ಯನಟ ಪುಲ್ಕಿತ್ ಮಣಿ ಅನುಕರಿಸಿದ ವಿವಾದದ ಬೆನ್ನಲ್ಲೇ ಹಲವು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ , ರಾಹುಲ್ ಗಾಂಧಿ ಅವರು ಪಕ್ಷ ತೊರೆದು ಸ್ಟ್ಯಾಂಡ್ಅಪ್ ಕಾಮಿಡಿಯನ್ ಆಗಬೇಕು ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಮಾಡುತ್ತಿರುವ ಮಿಮಿಕ್ರಿಯನ್ನು ನೋಡಿದರೆ, ಅವರು ಪಕ್ಷ ತೊರೆದು ಸ್ಟ್ಯಾಂಡ್ಅಪ್ ಕಾಮಿಡಿಯನ್ ಆಗಬೇಕು ಎಂದು ನನಗೆ ಅನಿಸುತ್ತದೆ ಎಂದು ಫಡ್ನವೀಸ್ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರಿಂದ ಕಾಂಗ್ರೆಸ್ ಉದ್ಯೋಗವಿಲ್ಲದಂತಾಗಿದೆ ಎಂದು ವ್ಯಂಗ್ಯವಾಡಿದ ಫಡ್ನವೀಸ್, ರಾಹುಲ್ ಗಾಂಧಿ ಹಾಸ್ಯ ಕಲಾವಿದನಾಗಿ ವೃತ್ತಿ ಆಯ್ಕೆ ಮಾಡಿಕೊಂಡರೆ ಕನಿಷ್ಠ ಅವರಿಗೆ ಸ್ವಲ್ಪ ಕೆಲಸವಾದರೂ ಸಿಗಬಹುದು ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವ್ಯಂಗ್ಯವೇ ತನ್ನಷ್ಟಕ್ಕೆ ತಾನೇ ಬರೆಯಲ್ಪಟ್ಟಂತಿದೆ. ಪ್ರಧಾನಮಂತ್ರಿ ಮೋದಿಯವರ ಹೆಸರನ್ನು ಅಗ್ಗದ ರಾಜಕೀಯ ನಾಟಕಕ್ಕೆ ಎಳೆದು ತರಲು ಆಗಾಗ ವೇದಿಕೆಗೆ ಬರುವ ಅಗತ್ಯ ಅಚ್ಚರಿಗೊಳಿಸುತ್ತಿದೆ. ರಾಹುಲ್ ಗಾಂಧಿ ಅವರೇ, ಒಮ್ಮೆ ಕನ್ನಡಿಯಲ್ಲಿ ನಿಮ್ಮನ್ನೇ ನೋಡಿಕೊಳ್ಳಿ ಎಂದು ಗೋಯಲ್ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ನಿನ್ನೆ ಶನಿವಾರ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಇಂದಿನ ಕೇಂದ್ರ ಸರ್ಕಾರದ ಆಡಳಿತ ವ್ಯವಸ್ಥೆ ಇಡೀ ದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದು, ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವುದನ್ನು ಅದು ಬಯಸುವುದಿಲ್ಲ ಎಂದು ಆರೋಪಿಸಿದ್ದರು.
ದ್ವೇಷವನ್ನು ದೇಶದಿಂದ ನಿರ್ಮೂಲನೆ ಮಾಡಲು ವಿದ್ಯಾರ್ಥಿಗಳಿಗೆ ಮಾತ್ರ ಸಾಧ್ಯ, ಅಂಧಭಕ್ತರಿಂದ ಸಾಧ್ಯವಿಲ್ಲ . ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಗರನ್ನು ಟೀಕಿಸುವವರು ಬಳಸುವ ‘ಅಂಧಭಕ್ತ’ ಎಂಬ ಪದವನ್ನು ರಾಹುಲ್ ಗಾಂಧಿ ಬಳಸಿದರು.
ವಿದ್ಯಾರ್ಥಿವೇತನದ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಕಳೆದ 10 ವರ್ಷಗಳಲ್ಲಿ 1.5 ಕೋಟಿ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.
ಭಾರತ ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ನೀಡುವ ವಿದ್ಯಾರ್ಥಿವೇತನಗಳ ಸಂಖ್ಯೆ 1.5 ಕೋಟಿಗಿಂತ ಕಡಿಮೆಯಿದೆ. ಶಿಕ್ಷಕರ ವಿಷಯಕ್ಕೆ ಬಂದರೆ, ಸುಮಾರು 10 ಲಕ್ಷ ಉದ್ಯೋಗಗಳು ಹುದ್ದೆಗಳು ಖಾಲಿ ಇವೆ ಎಂದು ಹೇಳಿದರು.