ರಾಜಕೀಯ

ಅಧಿವೇಶನಕ್ಕೆ ಸಂತೋಷ್ ಲಾಡ್ ಗೈರು

Vishwanath S

ವಿಧಾನಸಭೆ: ಕಳೆದ ಅಧಿವೇಶನದಲ್ಲಿ ಒಂದು ದಿನ ಮುಖ ತೋರಿಸಿ ಮಾಯವಾಗಿರುವ ಧಾರವಾಡ ಜಿಲ್ಲೆ ಕಲಘಟಗಿಯ ಕಾಂಗ್ರೆಸ್ ಶಾಸಕ ಸಂತೋಷ್ ಲಾಡ್ ಈ ಅಧಿವೇಶನಕ್ಕೆ  ಬರಲೇ ಇಲ್ಲ!

ತಮ್ಮ ಮಾಲೀಕತ್ವದ ಗಣಿ ಕಂಪನಿ ಅಕ್ರಮವೆಸಗಿದ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡ ಬಳಿಕ ಕ್ಷೇತ್ರದೆಡೆಗೂ ಮುಖ ಮಾಡದ ಶಾಸಕ ಲಾಡ್, ಎರಡು ವರ್ಷಗಳಲ್ಲಿ ನಡೆದ ಅಧಿವೇಶನಗಳಿಗೆ ಕೆಲವೇ ದಿನ ಹಾಜರಾಗಿದ್ದಾರೆ. ಶಾಸಕ ಲಾಡ್ ಈ ಬಾರಿಯಾದರೂ ಸದನಕ್ಕೆ ಬಂದು ಕ್ಷೇತ್ರದ ಸಮಸ್ಯೆಗೆ ದನಿಯಾಗುತ್ತಾರೆ ಎಂದು ಕಲಘಟಗಿ ಜನತೆ ನಂಬಿದ್ದರು. ಆದರೆ, ಅವರ ನಿರೀಕ್ಷೆ ಮೊದಲ ದಿನವಂತೂ ಹುಸಿಯಾಗಿದೆ.

ತುರ್ತು ಪರಿಸ್ಥಿತಿ ಇದೆಯೇ...?
ವಿಧಾನಪರಿಷತ್: ಮಳೆಗಾಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯಲ್ಲಿ ತುರ್ತು ಪರಿಸ್ಥಿತಿ ಇದೆಯೇ..? ಹಾಗಾದರೆ ಇಷ್ಟೊಂದು ಪೊಲೀಸರು ಯಾಕೆ? ಮೇಲ್ಮನೆಯಲ್ಲಿ ಸೋಮವಾರ ಸಭಾಧ್ಯಕ್ಷರನ್ನು ಪ್ರತಿಪಕ್ಷ ಬಿಜೆಪಿ ಸದಸ್ಯರು ಕೇಳಿದ ಪ್ರಶ್ನೆಗಳಿವು.

ಭೋಜನ ವಿರಾಮದ ನಂತರದ ಕಲಾಪದಲ್ಲಿ ರೈತರ ಕಬ್ಬಿನ ಬಾಕಿ ಬಿಲ್ ವಿಚಾರ ಸಂಬಂಧ ನಡೆಯುತ್ತಿದ್ದ ಚರ್ಚೆ ವೇಳೆ ಇಂತಹ ಪ್ರಶ್ನೆಗಳು ತೇಲಿ ಬಂದವು. ಬೆಳಗಾವಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಿರಾ? ಎಲ್ಲಿ ನೋಡಿದಲ್ಲಿ ಪೊಲೀಸರೇ ಪೊಲೀಸರು. ನಮ್ಮನ್ನು ಹೊರಗೆ ಹೋಗಲು ಬಿಡುತ್ತಿಲ್ಲ ಎಂದು ಸದಸ್ಯರು ಸಭಾಪತಿಗಳ ಗಮನ ಸೆಳೆದರು. ಸದಸ್ಯರ ಪ್ರಶ್ನೆಗಳಿಗೆ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ' ಎಂದರು.

ಎಂಇಎಸ್ ಸಭಾತ್ಯಾಗ
ವಿಧಾನಸಭೆ: ಕರ್ನಾಟಕ ಸರ್ಕಾರದಿಂದ ಗಡಿಭಾಗದಲ್ಲಿ ಮರಾಠಿಗೆ ತಾರತಮ್ಯವಾಗುತ್ತಿದೆ. ಸರ್ಕಾರದ ಈ ನಡೆಗೆ ನಮ್ಮ ಧಿಕ್ಕಾರ ಎಂದು ಕೂಗಿದ ಎಂಇಎಸ್ ಶಾಸಕರಾದ ಸಂಭಾಜಿ ಪಾಟೀಲ್ ಮತ್ತು ಅರವಿಂದ ಪಾಟೀಲ್ ಕಲಾಪದ ಆರಂಭದಲ್ಲೇ ಸಭಾತ್ಯಾಗ ಮಾಡಿದರು. ಪ್ರತಿಪಕ್ಷಗಳು ಕಬ್ಬು ಬೆಳೆಗಾರರ ಸಮಸ್ಯೆ ಕುರಿತ ಚರ್ಚೆಗೆ ಆಗ್ರಹಿಸುತ್ತಿದ್ದರೆ, ಈ ಇಬ್ಬರೂ `ಸರ್ಕಾರದ ತಾರತಮ್ಯಕ್ಕೆ ಧಿಕ್ಕಾರ, ಜೈ ಮರಾಠಿ' ಎಂದು ಘೋಷಣೆ ಕೂಗುತ್ತ ಹೊರನಡೆದರು.

SCROLL FOR NEXT