ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಬದಲಾಯಿಸಬೇಕು ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಎಚ್.ವಿಶ್ವನಾಥ್ ಮಂಗಳವಾರ ಒತ್ತಾಯಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ದಿಗ್ವಿಜಯ್ ಸಿಂಗ್ ಅವರು ರಾಜ್ಯಕ್ಕೆ ಬರ್ತಾರೆ.. ಹೋಗ್ತಾರೆ. ಅವರು ಸರ್ಕಾರವನ್ನು ಯಾವತ್ತೂ ವಿಮರ್ಶೆಗೆ ಒಳಪಡಿಸಿದವರಲ್ಲ. ಹೀಗಾಗಿ ಅವರನ್ನು ಬದಲಾವಣೆ ಮಾಡಬೇಕು ಎಂದರು. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಿಯಾಗಿ ಕೆಲಸ ಮಾಡದ ಅಸಮರ್ಥ ಸಚಿವರನ್ನು ತಮ್ಮ ಸಂಪುಟದಿಂದ ಕೈಬಿಡಬೇಕು ಎಂದು ಸಹ ವಿಶ್ವನಾಥ್ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅವರು ಸಹ ತಾಳ್ಮೆಯಿಂದ ಆಲಿಸುವ ಗುಣ ಬೆಳೆಸಿಕೊಳ್ಳಲಿ ಎಂದ ಮಾಜಿ ಸಂಸದ, ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ವಿಚಾರದಲ್ಲಿ ಸಿದ್ದರಾಮಯ್ಯ ಅವರು ಹಿರಿಯರ ಮಾತು ಕೇಳಬೇಕು ಎಂದರು. ಎಸಿಬಿ ರಚನೆ ಬಗ್ಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿರೋಧ ವ್ಯಕ್ತಪಡಿಸಿದ್ದರು.
ಎಸ್.ಎಂ.ಕೃಷ್ಣ ಹೇಳಿದ ಮಾತಿಗೆ ಅರ್ಥ ಇರುತ್ತದೆ. ಮಾತನ್ನು ಕೇಳುವ ತಾಳ್ಮೆಯನ್ನು ಸಿದ್ದರಾಮಯ್ಯ ಇಟ್ಟುಕೊಳ್ಳಬೇಕು ಎಂದು ವಿಶ್ವನಾಥ್ ಸಲಹೆ ನೀಡಿದರು. ರಾಜ್ಯದಲ್ಲಿ ಗುಲಾಂ ನಬಿ ಅಜಾದ್ ಅವರಂತವರನ್ನು ಉಸ್ತುವಾರಿಯನ್ನಾಗಿ ನೋಡಿದ್ದೇವೆ. ಆದರೆ ದಿಗ್ವಿಜಯ್ ಸಿಂಗ್ ಬಂದು ಹೋಗುವುದಷ್ಟೇ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.