ರಾಜಕೀಯ

ಮೇಟಿ ರಾಸಲೀಲೆ ಬಗ್ಗೆ ಸಿಎಂಗೆ ಮೊದಲೇ ಗೊತ್ತಿತ್ತು, ಆದ್ರೂ ಕ್ರಮ ತೆಗೆದುಕೊಂಡಿಲ್ಲ: ಎಚ್ ಡಿಕೆ

Lingaraj Badiger
ಬೆಂಗಳೂರು: ಮಾಜಿ ಅಬಕಾರಿ ಸಚಿವ ಎಚ್.ವೈ.ಮೇಟಿ ಅವರ ರಾಸಲೀಲೆ ಸಿಡಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ತಿಂಗಳು ಮೊದಲೇ ಮಾಹಿತಿ ಇತ್ತು. ಆದರೂ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬುಧವಾರ ಹೇಳಿದ್ದಾರೆ.
ರಾಸಲೀಲೆ ಸಿಡಿ ಮಾಧ್ಯಮಗಳಲ್ಲಿ ಬಿಡುಗಡೆಯಾಗುತ್ತಿದ್ದಂತೆ ಎಚ್.ವೈ.ಮೇಟಿ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜೆಡಿಎಸ್ ನಾಯಕ, ಈ ಪ್ರಕರಣದಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಜಗರವಾಗಿದೆ ಎಂದರು.
ಮೇಟಿ ಅವರ ರಾಸಲೀಲೆ ಬಗ್ಗೆ ಮೊದಲೇ ಗೊತ್ತಿದ್ದರೂ, ಸಿಡಿ ಬಹಿರಂಗಪಡಿಸುವ ಅವಶ್ಯಕತೆ ರಾಜ್ಯ ಸರ್ಕಾರಕ್ಕೆ ಇತ್ತಾ? ಈಗ ರಾಜ್ಯದ ಜನತೆ ರಾಸಲೀಲೆ ನೋಡಲಿ ಎಂದು ಸಿಡಿ ಬಿಡುಗಡೆ ಮಾಡಿದ್ದಾರಾ? ಸಿಡಿ ಬಿಡುಗಡೆಗೂ ಮುನ್ನ ಸಚಿವರ ರಾಜಿನಾಮೆ ಪಡೆದಿದ್ದರೆ ಸ್ವಲ್ಪವಾದರೂ ರಾಜ್ಯ ಸರ್ಕಾರದ ಮಾನ ಮರ್ಯಾದೆ ಉಳಿಯುತ್ತಿತ್ತು ಎಂದರು.
ಮೇಟಿ ರಾಸಲೀಲೆ ವಿಡಿಯೋ ಸಿಡಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೋಡಿರಬಹುದು. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರ ಕಾಮಪುರಾಣದ ಬಗ್ಗೆ ಮಾಹಿತಿ ಇತ್ತು. ಮಾಧ್ಯಮದಲ್ಲಿ ವಿಡಿಯೋ ಪ್ರಸಾರವಾದ ಮೇಲೆ ನೋಡೋಣ ಎಂದು ಸುಮ್ಮನಿದ್ದರು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. 
SCROLL FOR NEXT