ರಾಜಕೀಯ

ಸುಗಮ ಕಲಾಪಕ್ಕಾಗಿ ಸ್ಪೀಕರ್ ನಡೆಸಿದ ಸಂಧಾನ ವಿಫಲ, ಜಾರ್ಜ್ ರಾಜಿನಾಮೆ ಪ್ರತಿಪಕ್ಷಗಳ ಪಟ್ಟು

Lingaraj Badiger
ಬೆಂಗಳೂರು: ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ,ಕೆ, ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಾಜಿನಾಮೆಗೆ ಒತ್ತಾಯಿಸಿ ಮತ್ತು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳು ಸದನದಲ್ಲಿ ಪ್ರತಿಭಟನೆ ಮುಂದುವರೆಸಿವೆ. 
ಧರಣಿಯನ್ನು ಕೈಬಿಡುವಂತೆ ಸ್ಪೀಕರ್ ಕೆಬಿ ಕೋಳಿವಾಡ ನೇತೃತ್ವದಲ್ಲಿ ಇಂದು ನಡೆದ ಸಂಧಾನ ಸಭೆಯೂ ವಿಫಲವಾಗಿದೆ.
ಸುಗಮ ಕಲಾಪಕ್ಕಾಗಿ ಅಹೋರಾತ್ರಿ ಧರಣಿಯನ್ನು ಕೈಬಿಡುವಂತೆ ವಿಪಕ್ಷಗಳ ಮನವೊಲಿಸಲು ಸ್ಪೀಕರ್ ಸರ್ವಪಕ್ಷ ಸಭೆ ಕರೆದಿದ್ದರು. ಆದರೆ ಕೆಜೆ ಜಾರ್ಜ್ ರಾಜಿನಾಮೆ ಕೊಡೋವರೆಗೂ ಸದನ ನಡೆಯೋವರೆಗೆ ಅಹೋರಾತ್ರಿ ಧರಣಿ ನಡೆಸುವುದಾಗಿ ಪ್ರತಿಪಕ್ಷಗಳ ನಾಯಕರು ಪಟ್ಟು ಹಿಡಿದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ವಿಪಕ್ಷಗಳ ಮನವೊಲಿಕೆ ವಿಫಲವಾಗಿದ್ದು, ಬಿಜೆಪಿ, ಜೆಡಿಎಸ್ ಸರ್ಕಾರದ ನಿರ್ಧಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸುವ ನಿರ್ಧಾರವನ್ನು ಮುಂದುವರಿಸಿವೆ.
ಪ್ರತಿಪಕ್ಷಗಳ ಗದ್ದಲದ ನಡುವೆಯೂ ವಿಧಾನಸಭೆಯಲ್ಲಿ ನಾಲ್ಕು ವಿಧೇಯಕಗಳನ್ನು ಅಂಗೀಕರಿಸಲಾಗಿದ್ದು, ವಿಧೇಯಕಗಳ ಅಂಗೀಕಾರದ ನಂತರ ಸ್ಪೀಕರ್ ಕಲಾಪವನ್ನು ನಾಳೆ ಬೆಳಗ್ಗೆ 11ಗಂಟೆಗೆ ಮುಂದೂಡಿದರು. ಇನ್ನು ವಿಧಾನ ಪರಿಷತ್ ನಲ್ಲೂ ಜಾರ್ಜ್ ರಾಜಿನಾಮೆಗೆ ಒತ್ತಾಯಿಸಿ ಪ್ರತಿಪಕ್ಷ ನಾಯಕರು ಮುಖ್ಯಮಂತ್ರಿ ಭಾಷಣಕ್ಕೆ ಅಡ್ಡಿಪಡಿಸಿದರು. ಈ ವೇಳೆ ಆಡಳಿತ-ಪ್ರತಿಪಕ್ಷಗಳ ಮಧ್ಯೆ ತೀವ್ರ ವಾಕ್ಸಮರ ಉಂಟಾಯಿತು. ನಂತರ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಕಲಾಪವನ್ನು ನಾಳೆಗೆ ಮುಂದೂಡಿದರು.
SCROLL FOR NEXT