ಬೆಂಗಳೂರು: ಕಳೆದ 10 ವರ್ಷಗಳಲ್ಲಿ ರಾಜ್ಯ ಇಂಧನ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಮಾಹಿತಿ ನೀಡುವಂತೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
ಕೆ.ಬಿ.ಕೋಳಿವಾಡ ಅವರಿಗೆ ಸುದೀರ್ಘ 9 ಪುಟಗಳ ಪತ್ರ ಬರೆದಿರುವ ಕುಮಾರಸ್ವಾಮಿ, 2004 ರಿಂದ 2014ರ ಅವಧಿಯಲ್ಲಿ ಆಗಿರುವ ವಿದ್ಯುತ್ ಉತ್ಪಾದನೆ, ಬಳಕೆ, ಖರೀದಿ ಬಗ್ಗೆ ಮಾಹಿತಿ ನೀಡುವಂತೆ ಪತ್ರ ಬರೆದಿದ್ದು, ಸದನ ಸಮಿತಿಯ ಸದಸ್ಯರೂ ಆಗಿರುವ ಕುಮಾರಸ್ವಾಮಿ ಸ್ಪೀಕರ್ ಕೆ.ಬಿ.ಕೋಳಿವಾಡಗೆ ಸುದೀರ್ಘ ಒಂಭತ್ತು ಪುಟಗಳ ಪತ್ರ ಬರೆದು ಸಮರ್ಪಕ ಮಾಹಿತಿ ನೀಡುವಂತೆ ಆಗ್ರಹಿಸಿದ್ದಾರೆ.
ಇಂಧನ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಸದನದಲ್ಲಿ ಚರ್ಚೆಯಾಗಿ ಸದನ ಸಮಿತಿ ರಚನೆಯಾಗಿತ್ತು. ಇಂಧನ ಇಲಾಖೆಯ ಸಚಿವ ಡಿ.ಕೆ ಶಿವಕುಮಾರ್ ಸದನ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಾಕಷ್ಟು ಬಾರಿ ಕೇಳಿದ್ದರೂ ಇಂಧನ ಇಲಾಖೆ ಕಾರ್ಯದರ್ಶಿ ಮಾಹಿತಿ ನೀಡಿಲ್ಲ. ಹೀಗಾಗಿ ಮಾಹಿತಿ ನೀಡುವಂತೆ ಸ್ಪೀಕರ್ಗೆ ಪತ್ರ ಬರೆದಿದ್ದಾರೆ. ಮಾರ್ಚ್ 30 ರ ಒಳಗೆ ಸದನ ಸಮಿತಿಯ ವರದಿ ಸಲ್ಲಿಸುಪವುದಾಗಿ ಡಿ.ಕೆ ಶಿವಕುಮಾರ್ ಹೇಳಿದ್ದರು. ಆದರೆ ವರದಿ ತಯಾರಾಗಿ ವರ್ಷವೇ ಕಳೆದಿದ್ದರೂ ಇನ್ನೂ ವರದಿಯನ್ನು ಸಲ್ಲಿಸಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.