ರಾಜಕೀಯ

ಎಸ್ಎಂ ಕೃಷ್ಣ ಮೊಮ್ಮಗ ನಿರಂತರ್ ಗಣೇಶ್ ಕಾಂಗ್ರೆಸ್ ಗೆ ಸೇರ್ಪಡೆ

Lingaraj Badiger
ನವದೆಹಲಿ: ಇತ್ತೀಚೆಗಷ್ಟೆ ಬಿಜೆಪಿ ಸೇರಿದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರ ಸಹೋದರಿ ಎಸ್ ಎಂ ಸುನೀತಾ ಅವರ ಮೊಮ್ಮಗ ಡಾ. ನಿರಂತರ ಗಣೇಶ್ ಅವರು ಬುಧವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಡಾ.ನಿರಂತರ್ ಗಣೇಶ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಕಾಂಗ್ರೆಸ್ ಸೇರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿರಂತರ್ ಗಣೇಶ್ ಅವರು, ನಾನು ಯಾವುದೇ ಷರತ್ತು ಅಥವಾ ನಿರೀಕ್ಷೆಗಳನ್ನು ಇಟ್ಟುಕೊಂಡು ಪಕ್ಷ ಸೇರಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮಗಳಿಂದ ಪ್ರೇರಿತನಾಗಿ ಕಾಂಗ್ರೆಸ್ ಸೇರಿದ್ದೇನೆ ಎಂದರು.
ನಾನು ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದು, ಅದು ಕಾಂಗ್ರೆಸ್ ಸೇರಿದ ನಂತರವೂ ಮುಂದುವರೆಯಲಿದೆ ಎಂದು ನಿರಂತರ್ ಗಣೇಶ್ ತಿಳಿಸಿದ್ದಾರೆ.
ಎಂಎಸ್ ರಾಮಯ್ಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ ಡಾಕ್ಟರ್ ಆಗಿರುವ ಚಿಕ್ಕಮಗಳೂರಿನ ಮೂಡಿಗೆರೆ ಮೂಲದ ನಿರಂತರ ಗಣೇಶ್ ಅವರು, ಇತ್ತೀಚೆಗೆ ನಿಧನರಾದ ಎಸ್ ಎಂ ಸುನೀತಾ ಅವರ ಮಗಳು ಮೀನಾ ಅವರ ಪುತ್ರ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಸ್ಪರ್ಧೆಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಕಾರ್ಯಕ್ರಮಗಳು, ದಾನ ದತ್ತಿ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ನಾನು ಕಾಂಗ್ರೆಸ್ ಸೇರಲು ದಿನೇಶ್ ಗುಂಡೂರಾವ್ ಅವರು ಮೂಲ ಪ್ರೇರಣೆ, ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಪರ ಬೆಂಬಲಕ್ಕೆ ನಿಂತಿದ್ದೇನೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷವನ್ನು ಸೇರುತ್ತೇನೆ. ರೈತರು, ಬಡವರ ಏಳಿಗೆಗೆ ಶ್ರಮಿಸುವುದು ನನ್ನ ಗುರಿ ಎಂದು ಈ ಹಿಂದೆ ಡಾ. ನಿರಂತರ ಹೇಳಿದ್ದರು.
SCROLL FOR NEXT