ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ್
ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ವಿಸ್ತರಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದ್ದು,ಮೂವರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಲವರ ವಿರೋಧಗಳ ನಡುವೆ ಎಂಎಲ್ ಸಿ ಆರ್ .ಬಿ ತಿಮ್ಮಾಪುರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಪ್ರಾಬಲ್ಯಕ್ಕೆ ಪುರಾವೆಯಾಗಿದೆ.
ದಲಿತ ಖೋಟಾದಲ್ಲಿ ತಿಮ್ಮಾಪುರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಹೈಕಮಾಂಡ್ ಕೂಡ ಸಿಎಂ ಗೆ ಗ್ರೀನ್ ಸಿಗ್ನಲ್ ನೀಡಿತ್ತು. ಇನ್ನೂ ಬಿಬಿಎಂಪಿ ಮೇಯರ್ ಚುನಾವಣೆ ವೇಳೆ ಸುಳ್ಳು ಮಾಹಿತಿ ನೀಡಿ ಭತ್ಯೆ ಪಡೆದಿರುವ ಆರೋಪ ಎದುರಿಸುತ್ತಿರುವ ತಿಮ್ಮಾಪುರ, ಅನರ್ಹತೆಗೊಳ್ಳುವ ಭೀತಿಯಲ್ಲಿದ್ದಾರೆ.
ತಿಮ್ಮಾಪುರ ದಲಿತ ಎಡಪಂಥೀಯರಾಗಿದ್ದಾರೆ. ಹೀಗಾಗಿ ದಲಿತ ಬಲಪಂಥೀಯ ನಾಯಕ ಜಿ. ಪರಮೇಶ್ವರ ಅವರ ರಾಜಿನಾಮೆ ನಂತರ ಬಲ ಪಂಥೀಯ ದಲಿತ ಶಾಸಕನಿಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ಲಾಬಿ ನಡೆಸಲಾಗುತ್ತಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೂಡ ಬೆಂಬಲ ಸೂಚಿಸಿದ್ದಾರೆ.
ಮೋಟಮ್ಮ ಅಥವಾ ಮಳವಳ್ಳಿ ಶಾಸಕ ಎಂ.ಪಿ ನರೇಂದ್ರ ಸ್ವಾಮಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಪರಮೇಶ್ವರ್ ಒತ್ತಡ ಹಾಕುತ್ತಿದ್ದಾರೆ.
ಈಗಾಗಲೇ ಎಚ್.ಸಿ ಮಹಾದೇವಪ್ಪ ಮತ್ತು ಪ್ರಿಯಾಂಕ್ ಖರ್ಗೆ ದಲಿತ ಬಲಪಂಥೀಯ ವರ್ಗದಿಂದ ಸಚಿವರಾಗಿದ್ದಾರೆ. ಎಚ್. ಆಂಜನೇಯ ದಲಿತ ಎಡಪಂಥೀಯರಾಗಿದ್ದಾರೆ. ಹೀಗಿದ್ದರೂ ತಿಮ್ಮಾಪುರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಲ್ಲಿ ಸಿಎಂ ಯಶಸ್ವಿಯಾಗಿದ್ದು ಪರಮೇಶ್ವರ್ ಗೆ ಹಿನ್ನಡೆಯಾಗಿದೆ.
ಹಿರಿಯ ಶಾಸಕ ತಿಪಟೂರಿನ ಷಡಕ್ಷರಿ ಅವರನ್ನು ಕೈ ಬಿಟ್ಟಿರುವ ಸಿಎಂ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ಗೀತಾ ಮಹಾದೇವ ಪ್ರಸಾದ್ ಅವರಿಗೆ ಮಣೆ ಹಾಕಿದ್ದಾರೆ. ಸಂಪುಟದಲ್ಲಿ ಮಹಿಳೆಯರ ಸಂಖ್ಯೆ ತೀರಾ ಕಡಿಮೆಯಿದೆ, ಉಮಾಶ್ರೀ ಬಿಟ್ಟು ಉಳಿದಂತೆ ಉಳಿದ ಯಾವ ಮಹಿಳೆಯರು ಸಚಿವರಾಗಿರಲಿಲ್ಲ, ಹೀಗಾಗಿ ಮಹಿಳೆಯರ ಖೋಟಾದಲ್ಲಿ ಗೀತಾ ಅವರಿಗೆ ಸ್ಥಾನ ಕಲ್ಪಿಸಿರುವುದಾಗಿ ಸಿಎಂ ಸಮರ್ಥಿಸಿಕೊಂಡಿದ್ದಾರೆ.
ಇನ್ನೂ ಆರ್ .ಬಿ ತಿಮ್ಮಾಪುರ ಅವರ ಸೇರ್ಪಡೆ ಕಾಂಗ್ರೆಸ್ ನಲ್ಲೇ ಭಿನ್ನಮತಕ್ಕೆ ಕಾರಣವಾಗಿದೆ. ಅನರ್ಹತೆ ಭೀತಿಯಲ್ಲಿರುವ ಶಾಸಕ ತಿಮ್ಮಾಪುರ ಅವರ ಸೇರ್ಪಡೆಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೂಡ ವಿರೋಧ ವ್ಯಕ್ತ ಪಡಿಸಿದ್ದಾರೆ. ತಿಮ್ಮಾಪುರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದು ಹಲವರು ಸಲಹೆ ನೀಡಿದ್ದರೂ ಸಿಎಂ ಅದ್ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ತಮ್ಮದೇ ಹಾದಿಯಲ್ಲಿ ನಡೆದಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ವಿರೋಧ ಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಬೇಕಾಗುತ್ತದೆ, ಇದು ಕಾಂಗ್ರೆಸ್ ನಲ್ಲಿ ಮತ್ತೊಂದು ತಲೆ ನೋವು ಸೃಷ್ಟಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಾಂಗ್ರೆಸ್ ನಾಯಕರ ಅಭಿಮತವಾಗಿದೆ.
ಈ ನಡುವೆ ವಿಧಾನ ಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ನಿಯೋಗ ರಾಜ್ಯಪಾಲ ವಜುಬಾಯಿ ವಾಲಾ ಅವರನ್ನು ಭೇಟಿ ಮಾಡಿ, ಬಿಬಿಎಂಪಿ ಚುನಾವಣೆ ವೇಳೆ ಸುಳ್ಳು ಮಾಹಿತಿ ನೀಡಿ ವೇತನ ಭತ್ಯೆ ಪಡೆದಿರುವ 8 ಎಂಎಲ್ ಸಿಗಳನ್ನು ಅನರ್ಹಗೊಳಿಸುವಂತೆ ಮನವಿ ಸಲ್ಲಿಸಿದೆ,
ಹಳೇ ಮೈಸೂರು ಭಾಗದಲ್ಲಿ ಮಹಾದೇವ ಪ್ರಸಾದ್ ಪ್ರಬಲ ಲಿಂಗಾಯತ ನಾಯಕರಾಗಿದ್ದರು. ಅವರ ನಿಧನದ ನಂತರ ಯಾವ ಪ್ರಬಲ ನಾಯರ ಸಿಗದಿದ್ದ ಕಾರಣ ಗೀತಾ ಅವರಿಗೆ ಲಿಂಗಾಯತ ಪ್ರಾತಿನಿಧ್ಯತೆಯಡಿ ಗೀತಾ ಅವರಿಗೆ ಅವಕಾಶ ಒದಗಿ ಬಂದಿದೆ.
ಇನ್ನೂ ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆ ವೇಳೆ ಸಿಎಂ ತಾವು ಮತದಾರರಿಗೆ ನೀಡಿದ್ದ ಭರವಸೆ ಕೂಡ ಉಳಿಸಿಕೊಂಡಿದ್ದಾರೆ. ಒಂದು ವೇಳೆ ಗೀತಾ ಅವರನ್ನು ಗೆಲ್ಲಿಸಿದ್ದರೇ ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಸಿಎಂ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಧಾನ ಪರಿಷತ್ ಸದಸ್ಯ ಎಚ್.ಎಂ ರೇವಣ್ಣ ಅವರಿಗೆ ಪರಿಸರ ಮತ್ತು ಅರಣ್ಯ ಖಾತೆ, ತಿಮ್ಮಾಪುರ ಅವರಿಗೆ ಅಬಕಾರಿ ಖಾತೆ, ಗೀತಾ ಅವರಿಗೆ ಸಹಕಾರಿ ಖಾತೆ ನೀಡುವ ಸಾಧ್ಯತೆಯಿದೆ.