ವಿರಾಜಪೇಟೆ: ತಾಕತ್ತಿದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನ್ನ ನನ್ನ ವಿರುದ್ಧ ಸ್ಪರ್ಧಿಸಿ, ಠೇವಣಿ ಉಳಿಸಿಕೊಳ್ಳಲಿ ಎಂದು ಸಚಿವ ರಮಾನಾಥ ರೈ ಅವರು ಆರ್ಎಸ್ಎಸ್ ಮುಖಂಡ ಪ್ರಭಾಕರ್ ಭಟ್ ಅವರಿಗೆ ಶುಕ್ರವಾರ ಸವಾಲು ಹಾಕಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪ್ರಭಾಕರ ಭಟ್ ಅವರು ದಕ್ಷಿಣ ಕನ್ನಡದಲ್ಲಿ ನನ್ನ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದಾರೆ, ಆದರೂ ಅಲ್ಲಿನ ಜನ ನನ್ನೊಂದಿಗೆ ಇದ್ದಾರೆ ಎಂದರು.
ಇದೇ ವೇಳೆ ಕಲ್ಲಡ್ಕ ಶಾಲೆಗೆ ಕೊಲ್ಲೂರು ದೇವಾಲಯದ ವತಿಯಿಂದ ನೀಡಲಾಗುತ್ತಿದ್ದ ಅನುದಾನ ಸ್ಥಗಿತಗೊಳಿಸಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದ ವಿಚಾರ ಪ್ರಶ್ನಿಸಿದಾಗ ಕೆಂಡಾಮಂಡಲವಾದ ರಮಾನಾಥ್ ರೈ ಅವರು, ಸರ್ಕಾರದ ನಿಯಮದಂತೆ ದೇವಸ್ಥಾನದ ಹಣ ದೇವಸ್ಥಾನಕ್ಕೇ ಖರ್ಚಾಗಬೇಕು. ಭಟ್ ದೇವಸ್ಥಾನದ ಹಣ ಪಡಯಲು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ತಾಕತ್ತಿದ್ದರೆ ಅವರು ನನ್ನ ವಿರುದ್ಧ ಸ್ಪರ್ಧಿಸಲಿ, ಅವರಿಗೆ ಠೇವಣಿಯೂ ಸಿಗುವುದಿಲ್ಲ ಎಂದರು.
ಎರಡು ದಿನಗಳ ಹಿಂದಷ್ಟೇ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಅವರು ರಮನಾಥ ರೈ ಅವರು ಮುಖ್ಯಮಂತ್ರಿಗಳಿಗೆ ಅನುದಾನ ಸ್ಥಗಿತಗೊಳಿಸುವಂತೆ ಕೋರಿ ಪತ್ರ ಬರೆದಿದ್ದರು ಎಂದು ಆರೋಪಿಸಿದ್ದರು. ಅಲ್ಲದೆ ಪತ್ರದ ಪ್ರತಿಯನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸಿದ್ದರು.