ರಾಜಕೀಯ

ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಬಿಎಸ್'ವೈ, ಈಶ್ವರಪ್ಪ ಬಣಗಳ ನಡುವೆ ವಾಕ್ಸಮರ

Manjula VN

ಕಲಬುರಗಿ: ಕಲಬುರಗಿಯಲ್ಲಿ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಆರಂಭವಾಗಿದ್ದು, ಕಾರ್ಯಕಾರಿಣಿಯ ಮೊದಲ ದಿನವೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕುರಿತಂತೆ ಗದ್ದಲ ನಡೆದಿದೆ.

ರಾಜ್ಯದ ಸಮಸ್ಯೆಗಳು ಹಾಗೂ ಪಕ್ಷದ ವಿಚಾರಗಳ ಕುರಿತಂತೆ ನಡೆಯಬೇಕಿದ್ದ ಈ ವೇದಿಕೆ ಪರಸ್ಪರ ಘೋಷಣೆ, ಸವಾಲು ಹಾಗೂ ಪ್ರತಿ ಸವಾಲುಗಳ ವೇದಿಕೆಯಾಗಿತ್ತು.

ಕಾರ್ಯಕಾರಣಿ ಸಭೆ ಆರಂಭವಾಗುತ್ತಿದ್ದಂತೆ ರಾಜ್ಯದ ಬರ ಪರಿಸ್ಥಿತಿ ಕುರಿತು ಪಕ್ಷ ನಡೆಸಿದ ಸಮೀಕ್ಷೆಯ ವರದಿ ಕುರಿತು ಚರ್ಚೆ ನಡೆಸಲಾಗಿತ್ತು. ನಂತರ, ರಾಜ್ಯ ಬಿಜೆಪಿ ಘಟನ ಹಾಗೂ ಜಿಲ್ಲಾ ಘಟಕಗಳಲ್ಲಿ ನಡೆದಿರುವ ಕೆಲ ಚಟುವಟಿಕೆಗಳ ಬಗ್ಗೆ ವರದಿ ನೀಡಲಾಯಿತು. ಈ ವೇಳೆ ಕೆಲ ನಾಯಕರು ಬ್ರಿಗೇಡ್ ವಿಚಾರವನ್ನು ಪ್ರಸ್ತಾಪ ಮಾಡಿದಿರು. ಇದು ಸಭೆಯಲ್ಲಿ ಗದ್ದಲಕ್ಕೆ ಎಡೆಮಾಡಿಕೊಟ್ಟಿತು.

ಯಡಿಯೂರಪ್ಪ ಅವ ಬೆಂಬಂಲಿಗರು ರಾಯಣ್ಣ ಬ್ರಿಗೇಡ್ ವಿರುದ್ಧ ದನಿ ಎತ್ತಿದರು. ನಂತರ ಕೆಲವರು ಧರಣಿ ನಡೆಸಲು ಮುಂದಾಗಿದ್ದರು. ಇನ್ನು ಈಶ್ವರಪ್ಪ ಬೆಂಬಲಿಗರೂ ಕೂಡ ಯಡಿಯೂರಪ್ಪ ಅವರ ವಿರುದ್ಧ ಘೋಷಣೆ ಕೂಗಲು ಆರಂಭಿಸಿದ್ದರು. ಬ್ರಿಗೇಡ್ ಗೊಂದಲ ಕಾರ್ಯಕಾರಿಣಿ ಸಭೆಯಲ್ಲೂ ಗೊಂದಲವನ್ನು ಸೃಷ್ಟಿ ಮಾಡಿತು.

ನಾಯಕರ ನಡುವೆ ವಾಕ್ಸಮರ ನಡೆಯುತ್ತಿದ್ದಂತೆ ಮಧ್ಯೆಪ್ರವೇಶ ಮಾಡಿದ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಈ ಬಗ್ಗೆ ನಂತರ ಚರ್ಚೆ ನಡೆಸುವುದಾಗಿ ತಿಳಿಸಿದರು. ಈ ವೇಳೆ ವಿಶ್ವನಾಥ್, ರೇಣುಕಾಚಾರ್ಯ ಹಾಗೂ ಕೆಲಸ ಮಹಿಳಾ ಮೋರ್ಚ ಸದಸ್ಯರು, ಯಡಿಯೂರಪ್ಪ ಅವರ ಬೆಂಬಲಿಗರು ಘೋಷಣೆ ಕೂಗಲು ಆರಂಭಿಸಿದರು. ಅಲ್ಲದೆ, ಮೊದಲು ಈ ವಿಚಾರವನ್ನು ಚರ್ಚೆ ನಡೆಸಬೇಕೆಂದು ಧರಣಿ ಕುಳಿತರು. ಸಭೆಯಲ್ಲಿ ಕೆಲ ವಿಚಿತ್ರವಾದ ಬೆಳವಣಿಗೆಗಳು ಕೂಡ ಕಂಡುಬಂದಿದ್ದವು. ನಾಯಕರು ನೀಡಿದ್ದ ಕೆಲ ಹೇಳಿಕೆಗಳು ಸಭೆಯಲ್ಲಿ ಗೊಂದಲಕ್ಕೆ ಕಾರಣ ಮಾಡಿಕೊಟ್ಟಿತ್ತು.

ಸಭೆ ಬಳಿಕ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಆರ್. ಆಶೋಕ್ ಅವರು, ಕರ್ನಾಟಕ ರಾಜ್ಯದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಅವರು ಒಬ್ಬರ ನಂತರ ಒಬ್ಬರು ನಾಯಕರೊಂದಿಗೆ ಮಾತನಾಡುವ ಮೂಲಕ ಚರ್ಚೆ ನಡೆಸಿದ್ದರು. ನಾನು ಕೂಡ ರಾವ್ ಅವರೊಂದಿಗೆ ಚರ್ಚೆ ನಡೆಸಿದೆ. ಅತೃಪ್ತಿ ಬಿಜೆಪಿ ನಾಯಕರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆವರು ನವದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ. ಶೀಘ್ರದಲ್ಲಿಯೇ ಪಕ್ಷದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಗಳು ದೂರಾಗಲಿವೆ ಎಂದು ಹೇಳಿದ್ದಾರೆ.

ಇದೇ ವೇಳೆ ಈಶ್ವರಪ್ಪ ಅವರು ರಾಯಣ್ಣ ಬ್ರಿಗೇಡ್ ನ್ನು ಕೈಬಿಡಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವಅವರು, ಪಕ್ಷದಲ್ಲಿ ಉಂಟಾದ ಬೆಳವಣಿಗೆಗಳಿಂದ ಅತೃಪ್ತಿಗೊಂಡು ರಾಯಣ್ಣ ಬ್ರಿಗೇಡ್ ಆರಂಭವಾಗಿದೆ. ಈಶ್ವರಪ್ಪ ಅವರ ಕುಂದುಕೊರತೆಗಳಿಗೆ ಪರಿಹಾರ ಸಿಕ್ಕ ಬಳಿಕ ಸಮಸ್ಯೆ ದೂರಾಗಲಿದೆ ಎಂದು ತಿಳಿಸಿದ್ದಾರೆ.

ಅತೃಪ್ತರ ಬಾಯಿಗೆ ಬೀಗ ಹಾಕಿದ ಬಿಜೆಪಿ ವರಿಷ್ಠರು
ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಬಣ ರಾಜಕೀಯಕ್ಕೆ ತೆರೆಯೆಳೆಯಲು ಮುಂದಾಗಿರುವ ಬಿಜೆಪಿ ವರಿಷ್ಟರು, ಬಿಜೆಪಿ ಹಾಗೂ ರಾಯಣ್ಣ ಬ್ರಿಗೇಡ್ ನಡುವೆ ಲಕ್ಷ್ಮಣ ರೇಖೆಯನ್ನು ಎಳೆದಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷದ ವಿಚಾರಗಳನ್ನು ಬ್ರಿಗೇಡ್ ವೇದಿಕೆಯಲ್ಲಿ ಚರ್ಚಿಸಬಾರದು ಎಂದು ಸೂಚನೆ ನೀಡಿದ್ದಾರೆ. ಒಂದು ವೇಳೆ ಶಿಸ್ತು ಮೀರಿದ್ದೇ ಆದರೆ, ಕಠಿಣ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

SCROLL FOR NEXT