ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಕುದುರೆ ವ್ಯಾಪಾರ ತಪ್ಪಿಸುವ ಸಲುವಾಗಿ ಬೆಂಗಳೂರಿನ ಬಿಡದಿ ಬಳಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಕಾಂಗ್ರೆಸ್ ಶಾಸಕರು ಮಾಧ್ಯಮಗಳ ಮುಂದೆ ಪರೇಡ್ ನಡೆಸಲು ಮುಂದಾಗಿದ್ದಾರೆ.
ಬಿಜೆಪಿ ಆರೋಪಗಳಿಗೆ ಉತ್ತರ ನೀಡುವುದಕ್ಕಾಗಿ ಈಗಲ್ಟನ್ ರೆಸಾರ್ಟ್ ನಲ್ಲಿರುವ ಎಲ್ಲಾ 44 ಶಾಸಕರು ಮಾಧ್ಯಮಗಳ ಮುಂದೆ ಬರಲಿದ್ದಾರೆ. ನೀವು ಅವರಿಗೆ ಯಾವುದೇ ಪ್ರಶ್ನೆಯನ್ನು ಕೇಳಬಹುದು ಎಂದು ಎಐಸಿಸಿ ವಕ್ತಾರ ಶಕ್ತಿ ಸಿಂಗ್ ಗೊಹ್ಲಿ ಅವರು ಹೇಳಿದ್ದಾರೆ.
ನಾನು ಕಳೆದ ರಾತ್ರಿಯಿಂದ ರೆಸಾರ್ಟ್ನಲ್ಲಿದ್ದೇನೆ. ನಾವು ಒಂದು ಕುಟುಂಬದಂತೆ ವಾಸಿಸುತ್ತೇವೆ. ನಮ್ಮ ಮಧ್ಯ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ ಬಿಜೆಪಿಯವರು ಆಂತರಿಕ ಭಿನ್ನಮತ ಇದೆ ಎಂದು ಬಿಂಬಿಸುತ್ತಿದ್ದಾರೆ ಎಂದು ಗೊಹ್ಲಿ ಅವರು ಆರೋಪಿಸಿದ್ದಾರೆ.
ಶಂಕರ್ ಸಿಂಗ್ ವಘೇಲಾ ಹಾಗೂ ಬಲ್ವಂತ್ ಸಿಂಗ್ ವಘೇಲಾ ಅವರು ಸೇರಿದಂತೆ ಕಾಂಗ್ರೆಸ್ ನಲ್ಲಿ ಹಲವು ನಾಯಕರ ಮಧ್ಯ ಭಿನ್ನಾಭಿಪ್ರಾಯ ಇದೆ. ಅವರ ಶಾಸಕರ ಮೇಲೇಯೇ ಅವರಿಗೆ ನಂಬಿಕೆ ಇಲ್ಲ. ಹೀಗಾಗಿ ಬೆಂಗಳೂರಿಗೆ ಕಳುಹಿಸಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಸಿಯಿರುವ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರು, ನಮ್ಮ ಶಾಸಕರ ಮೇಲೆ ಒತ್ತಡವಿದೆ. ಗುಜರಾತ್ನಲ್ಲಿ ಪ್ರವಾಹ ಪರಿಸ್ಥಿತಿ ಇರುವ ಕಾರಣ ಹೆಚ್ಚೆಚ್ಚು ದೂರವಾಣಿ ಕರೆಗಳು ಬರುತ್ತಿವೆ. ಹೀಗಾಗಿ ಅವರ ಮೊಬೈಲ್ಗಳು ಸ್ವಿಚ್ ಆಫ್ ಆಗಿವೆ. ಯಾರಿಗೂ ಮೊಬೈಲ್ ಬಳಕೆಗೆ ನಿರ್ಬಂಧ ಹೇರಿಲ್ಲ’ ಎಂದು ಸ್ಪಷ್ಟಪಡಿಸಿದರು.
ಯಾವ ಶಾಸಕರೂ ತಪ್ಪಿಸಿಕೊಂಡಿಲ್ಲ. ಎಲ್ಲರೂ ಜತೆಗೆ ಇದ್ದಾರೆ. ರಾಜ್ಯದ ವಿವಿಧ ಸ್ಥಳಗಳಿಗೆ ಪ್ರವಾಸ ತೆರಳಲಿದ್ದಾರೆ. ಆದರೆ ಎಲ್ಲಿಗೆ ಹೋಗಬೇಕು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ’ ಎಂದು ಅವರು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos