ಶಿವಮೊಗ್ಗ: ಕುಟುಂಬದಲ್ಲಿ ಮೂಡಿದ ಸಮಸ್ಯೆಗಳು ಬಂಗಾರಪ್ಪ ಕುಟುಂಬವನ್ನು ರಾಜಕೀಯ ದ್ವೇಷದಲ್ಲಿಯೇ ಮುಳುಗಿಸಿತು. ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ ಅವರ ಮಕ್ಕಳಾದ, ಕುಮಾರ್ ಮತ್ತು ಮಧು ಬಂಗಾರಪ್ಪ ಬದ್ಧ ವೈರಿಗಳಾಗಿದ್ದಾರೆ. ಸೌಜನ್ಯಕ್ಕಾದರೂ ಒಬ್ಬರ ಬಗ್ಗೆ ಮತ್ತೊಬ್ಬರು ಒಂದೇ ಒಂದು ಮಾತು ಕೂಡ ಆಡುವುದಿಲ್ಲ.
ಕುಮಾರ್ ಚಿತ್ರನಟರಾಗಿ ನಂತರ ರಾಜಕೀಯ ಪ್ರವೇಶಿಸಿದರು, ಉದ್ಯಮಿಯಾಗಿದ್ದ ಮಧು ರಾಜಕಾರಣಿಯಾಗಿದ್ದಾರೆ. ಎಸ್.ಎಂ ಕೃಷ್ಣ ಸಂಪುಟದಲ್ಲಿ ಕುಮಾರ್ ಸಚಿವರಾಗಿದ್ದಾಗ ಬಂಗಾರಪ್ಪ ಕುಟುಂಬದಲ್ಲಿ ಸಮಸ್ಯೆ ತಲೋದಾರಿತು ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.
ಕುಮಾರ್ ಸಚಿವರಾಗಿದ್ದ ವೇಳೆ ಮಧು ಬಂಗಾರಪ್ಪ ಉದ್ಯಮದಲ್ಲಿ ನಷ್ಟ ಅನುಭವಿಸಿ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದರು. ಮಧುಗೆ ಸಹಾಯ ಮಾಡುವಂತೆ ಕುಮಾರ್ ಗೆ ಕುಟುಂಬಸ್ಥರು ಹೇಳಿದರು, ಆದರೆ ಇದಕ್ಕೆ ಕುಮಾರ್ ಬಂಗಾರಪ್ಪ ನಿರಾಕರಿಸಿದ್ದೇ ಈ ಸಹೋದರರ ಮುನಿಸಿಗೆ ಕಾರಣ ಎಂದು ಅಭಿಪ್ರಾಯ ಪಡಲಾಗಿದೆ.
2004 ರಲ್ಲಿ ಬಿಜೆಪಿಯಿಂದ ಮಧು ಸೊರಬ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಂಗಾರಪ್ಪ ಹೇಳಿದಾಗ ವೈಮನಸ್ಯ ಮತ್ತಷ್ಟು ಹೆಚ್ಚಾಯಿತು, ಸಚಿವರಾಗಿದ್ದ ಕುಮಾರ್ ಬಂಗಾರಪ್ಪ ರಾಜಿನಾಮೆ ನೀಡಿ ಬಂಗಾರಪ್ಪ ನಿರ್ದೇಶನದಂತೆ ಬಿಜೆಪಿ ಸೇರಿದರು. ಆದರೆ ಸೊರಬದಿಂದ ಮಧು ಕಣಕ್ಕಿಳಿಯುತ್ತಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಅದೇ ದಿನ ಮತ್ತೆ ಬಿಜೆಪಿಯಿಂದ ಕುಮಾರ್ ಬಂಗಾರಪ್ಪ ವಾಪಸ್ ಕಾಂಗ್ರೆಸ್ ಗೆ ಸೇರಿದರು.
2004 ರಲ್ಲಿ ಸೊರಬ ಕ್ಷೇತ್ರದಿಂದ ಜಯಗಳಿಸಿದ ಕುಮಾರ್ , ಧರ್ಮಸಿಂಗ್ ಸಂಪುಟದಲ್ಲಿ ಸಚಿವರಾಗದಂತೆ ಬಂಗಾರಪ್ಪ ತಡೆದರು. 2011 ರಲ್ಲಿ ಬಂಗಾರಪ್ಪ ನಿಧನದ ನಂತರ ಮಧು ಮತ್ತು ಕುಮಾರ್ ನಡುವಿನ ಶತೃತ್ವ ಮತ್ತಷ್ಟು ಜಾಸ್ತಿಯಾಯಿತು. ತಮ್ಮ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸದಂತೆ ಕುಮಾರ್ ಬಂಗಾರಪ್ಪ ಅವರನ್ನು ಮಧು ತಡೆದರು. ಸಹೋದರರ ನಡುವಿನ ವೈಷಮ್ಯ ಬಗೆಹರಿಸಲು ಹಲವರು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಸದ್ಯ ಕುಮಾರ್ ಬಿಜೆಪಿಯಲ್ಲಿದ್ದು, ಮಧ ಬಂಗಾರಪ್ಪ ಜೆಡಿಎಸ್ ನಲ್ಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos