ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ 150 ಸೀಟುಗಳನ್ನು ಗೆಲ್ಲಲೇ ಬೇಕೆಂಬ ಹಂಬಲದಲ್ಲಿರುವ ಬಿಜೆಪಿ ಗ್ರಾಮೀಣ ಮತ್ತು ಅರೆ ಗ್ರಾಮೀಣ ಭಾಗದ ಯುವಕರನ್ನು ಸೆಳೆಯಲು ಮುಂದಾಗಿದೆ.
ಬಿಜೆಪಿ ಯುವ ಮೋರ್ಚಾ ವಿಧಾನಸಭೆ ಕ್ಷೇತ್ರಗಳಲ್ಲಿ ತಾಲೂಕು ಮತ್ತು ಜಿಲ್ಲಾಮಟ್ಟದ ಕಬಡ್ಡಿ ಟೂರ್ನಮೆಂಟ್ ಗಳನ್ನು ಆಯೋಜಿಸುತ್ತಿದೆ.
ಪಕ್ಷದ ಹಿರಿಯ ಮುಖಂಡ ದೀನದಯಾಳ್ ಉಪಾಧ್ಯಾಯ ಅವರ ಶತಮಾನೋತ್ಸವದ ಅಂಗವಾಗಿ ಮೇ 14ರಿಂದ ಕಬಡ್ಡಿ ಟೂರ್ನಮೆಂಟ್ ಆಯೋಜಿಸಿದೆ. ಪ್ರತಿ ವಿಧಾನಸಭೆ ಕ್ಷೇತ್ರದಿಂದ 20 ತಂಡಗಳಿಂದ ಸುಮಾರು 50 ಸಾವಿರ ಯುವಕರು ಭಾಗವಹಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಈ ಕಾರ್ಯಕ್ರಮದಿಂದಾಗಿ ಪ್ರತಿ ವಿಧಾನಸಭೆ ಕ್ಷೇತ್ರದಿಂದ ಸುಮಾರು 300 ಮಂದಿ ಸದಸ್ಯರು ಬಿಜೆಪಿ ಯುವ ಮೋರ್ಚಾಗೆ ಸೇರ್ಪಡೆಗೊಳ್ಳಲು ಸಹಾಯವಾಗಲಿದೆ. ಪ್ರೇಕ್ಷಕರನ್ನು ಸೆಳೆಯಲು ಪ್ರೋ ಕಬಡ್ಡಿ ಲೀಗ್ ಸ್ಟಾರ್ ಗಳನ್ನು ಕರೆಸುತ್ತೇವೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶ್ ಗೌಡ ಹೇಳಿದ್ದಾರೆ.
ಜೆಡಿಎಸ್ ಪಕ್ಷ ಕೂಡ ಸುಮ್ಮನೇ ಕೂತಿಲ್ಲ, ಗ್ರಾಮೀಣ ಭಾಗದ ಮತದಾರರನ್ನು ಸೆಳೆಯಲು ಹೊಸ ತಂತ್ರವೊಂದನ್ನು ರೂಪಿಸಿದೆ, ಪಕ್ಷದ ವರಿಷ್ಠ ಎಚ್ .ಡಿ ದೇವೇಗೌಡರ 85ನೇ ಹುಟ್ಟುಹಬ್ಬದ ಅಂಗವಾಗಿ,ಮೇ 18 ರಿಂದ ಮುದ್ದೆ ಮತ್ತು ರೋಟಿ ಪೇ ಚರ್ಚಾ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.ದಕ್ಷಿಣ ಕರ್ನಾಟಕದವರಿಗಾಗಿ ಮುದ್ದೆ ಪೇ ಚರ್ಚಾ, ಉತ್ತರ ಕರ್ನಾಟಕದವರಿಗಾಗಿ ರೋಟಿ ಪೇ ಚರ್ಚಾ ನಡೆಸಲಿದೆ. ಈ ಚರ್ಚೆ ವೇಳೆ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಅನ್ಯಾಯ ಮತ್ತು ಕಳಸಾ ಬಂಡೂರಿ ವಿವಾದಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವೈಫಲ್ಯಗಳ ಕುರಿತು ಚರ್ಚಿಸಲಾಗುವುದು ಎಂದು ಶಾಸಕ ವೈಎಸ್ ವಿ ದತ್ತಾ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos