ಬೆಳಗಾವಿ: ವಿಧಾನಮಂಡಲ ಅಧಿವೇಶನಕ್ಕೆ ಗೈರು ಹಾಜರಾಗುತ್ತಿರುವ ರಾಜ್ಯ ಸಚಿವರು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಕಾರ್ಯನಿರತರಾಗಿದ್ದಾರೆಂದು ವಿರೋಧ ಪಕ್ಷಗಳು ಬುಧವಾರ ತೀವ್ರವಾಗಿ ಕಿಡಿಕಾರಿದವು.
ವಿಧಾನಮಂಡಲದಲ್ಲಿ ಮಾತನಾಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ಸದಸ್ಯರು, ಸಚಿವರಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಬದಲು ಸಚಿವರು ಪ್ರತ್ಯೇಕ ಧರ್ಮ ಕುರಿತ ಹೋರಾಟದಲ್ಲಿ ಕಾರ್ಯನಿರತರಾಗಿದ್ದಾರೆಂದು ಕುಮಾರಸ್ವಾಮಿಯವರು ವ್ಯಂಗ್ಯವಾಡಿದ್ದಾರೆ.
ಕಲ್ಲುಗಣಿಗಾರಿಕೆಯಲ್ಲಿ ಅಕ್ರಮ ನಡೆಯುತ್ತಿರುವ ವಿಚಾರವನ್ನು ಶೂನ್ಯ ಅವಧಿಯಲ್ಲಿ ಜೆಡಿಎಸ್ ಶಾಸಕ ಮಂಜುನಾಥ್ ಗೌಡ ಅವರು ಪ್ರಸ್ತಾ ಮಾಡಿದರು. ಈ ಕುರಿತಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ವಿನಯ್ ಕುಲಕರ್ಣಿಯವರು ಸ್ಪಷ್ಟನೆ ನೀಡಬೇಕೆಂದು ತಿಳಿಸಿದರು. ಆದರೆ, ಅಧಿವೇಶನಕ್ಕೆ ಕುಲಕರ್ಣಿಯವರು ಗೈರು ಹಾಜರಾಗಿದ್ದರು.
ಬಳಿಕ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರು ಪ್ರತಿಕ್ರಿಯೆ ನೀಡಲು ಮುಂದಾದಾಗ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿ ವಿನಯ್ ಕುಲಕರ್ಣಿಯವರು ಎಲ್ಲಿದ್ದಾರೆಂದು ಪ್ರಶ್ನಿಸಿದರು.
ಬಳಿಕ ಅಸಮಾಧಾನ ವ್ಯಕ್ತಪಡಿಸಿದ ಮಂಜುನಾಥ್ ಗೌಡ ಅವರು, ಗಣಿಗಾರಿಕೆಯಲ್ಲಿ ಅಕ್ರಮ ನಡೆದಿರುವುದು ಅತ್ಯಂತ ಗಂಭೀರವಾದ ವಿಚಾರ. ಇಂತಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಸಚಿವರು ಹಾಜರಿರಬೇಕಿತ್ತು ಎಂದು ಹೇಳಿದರು. ಮಂಜುನಾಥ್ ಅವರಿಗೆ ಪಕ್ಷದ ನಾಯಕರಾದ ಸುರೇಶ್ ಗೌಡ ಹಾಗೂ ಬಿಜೆಪಿ ಸದಸ್ಯರಾದ ಸಿ.ಟಿ.ರವಿ, ಜೀವರಾಜ್ ಮತ್ತು ಅರವಿಂದ ಲಿಂಬಾವಳಿಯವರು ಬೆಂಬಲ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಸ್ಪೀಕರ್ ಕೋಳಿವಾಡ ಅವರು, ಸಚಿವರು ಅನುಮತಿ ಪಡೆದು ಗೈರು ಹಾಜರಾಗಿದ್ದಾರೆಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos