ಶಿವಮೊಗ್ಗ: ಬಿಜೆಪಿ ನಾಯಕರು ಭ್ರಷ್ಟಾಚಾರಿಗಳು ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟ್ ಖಾರವಾಗಿಯೇ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು, ರಾಹುಲ್ ಒಬ್ಬ ಹುಚ್ಚ ಎಂದು ಗುರುವಾರ ತಿರುಗೇಟು ನೀಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ರಾಹುಲ್ ಗಾಂಧಿ ಒಬ್ಬ ತಲೆ ತಿರುಕ. ಟೀಕೆ ಮಾಡುವ ಮುನ್ನ ತಮ್ಮ ಸುತ್ತ ಯಾರಿದ್ದಾರೆಂದು ನೋಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.
ರಾಜ್ಯವನ್ನು ಹಾಳು ಮಾಡಿದಂಥ ಭ್ರಷ್ಟ ಸಿಎಂ ಅನ್ನು ರಾಹುಲ್ ಪಕ್ಕದಲ್ಲಿ ಇಟ್ಟುಕೊಂಡಿದ್ದಾರೆ. ಇಂತಹವರಿಗೆ ರಾಜ್ಯದ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಎಸ್ ವೈ ಹೇಳಿದ್ದಾರೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಬಿ.ಎಸ್. ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರು ಕರ್ನಾಟಕವನ್ನು ಲೂಟಿ ಮಾಡಿದ್ದರು. ನಮ್ಮ ಸರ್ಕಾರ ಅವರಿಗೆ ತಕ್ಕ ಪಾಠ ಕಲಿಸಿತ್ತು. ಆದರೆ, ಈಗ ಪ್ರಧಾನಿ ಮೋದಿ ಅವರು ಗಣಿ ಲೂಟಿಯಲ್ಲಿ ಭಾಗಿಯಾಗಿರುವ 8 ಜನರನ್ನು ಜೈಲಿನಿಂದ ಹೊರತಂದು ವಿಧಾನಸೌಧಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದಾರೆ ಎಂದು ನಿನ್ನೆ ರಾಹುಲ್ ಗಾಂಧಿ ಬಿಜೆಪಿ ನಾಯಕರ ವಿರುದ್ಧ ಟ್ವೀಟ್ ಮಾಡಿದ್ದರು.