ಮೈಸೂರು: ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಯುಗ ಆರಂಭವಾಗಿದ್ದು, ಎಚ್.ಡಿ ದೇವೇಗೌಡರು ಮುಂದಿನ ಪ್ರಧಾನಮಂತ್ರಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿ ರಾಷ್ಟ್ರೀಯ ಪಕ್ಷಗಳು ಅಧಿಕಾರ ಹಿಡಿಯುತ್ತಿವೆ. ಆಂಧ್ರಪ್ರದೇಶ, ತೆಲಂಗಾಣ, ಮಧ್ಯ ಈಶಾನ್ಯ ಭಾಗದಲ್ಲಿಯೂ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿದೆ. ಇದನ್ನು ಗಮನಿಸಿದರೆ ಇಂದಿನ ರಾಜಕೀಯ ಪ್ರಾಂತೀಯ ಪಕ್ಷಗಳ ಕಡೆ ವಾಲಿರುವುದು ತಿಳಿಯುತ್ತದೆ.
ಜನರು ಸ್ಥಳೀಯ ಪಕ್ಷಗಳಿಗೆ ಒಲವು ತೋರುತ್ತಿದ್ದಾರೆ. ಹಾಗಾಗಿ ಈ ಪಕ್ಷಗಳು ಒಗ್ಗೂಡಿ ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಕಾಲ ಬಂದಿದೆ. ಈ ಕಾರ್ಯದಲ್ಲಿ ಮುಂದಾಳತ್ವ ವಹಿಸುವ ಶಕ್ತಿ ದೇವೇಗೌಡ ಅವರಿಗಿದೆ ಎಂದು ಹೇಳಿದರು.
ನಾಯಕತ್ವದ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದು ಎಚ್.ವಿಶ್ವನಾಥ್ ಹೇಳಿದರು. 'ಪ್ರಜ್ವಲ್ ರಾಜಕೀಯ ಭವಿಷ್ಯ ಉಜ್ವಲವಾಗಿದೆ. ಆತನಿಗೆ ಸಾಕಷ್ಟು ದೂರದೃಷ್ಟಿ ಇದ್ದು, ಕನ್ನಡ ಹಾಗೂ ಇಂಗ್ಲಿಷ್ ಭಾಷೆ ಮೇಲೆ ಹಿಡಿತವಿದೆ. ಅಲ್ಲದೆ, ನಾಯಕತ್ವದ ಗುಣಗಳನ್ನೂ ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ ಆತ ರಾಜಕೀಯದಲ್ಲಿ ಉತ್ತಮವಾಗಿ ಬೆಳೆಯುವ ಭರವಸೆಯ ನಾಯಕನಾಗಲಿದ್ದಾರೆ,'' ಎಂದು ಬಣ್ಣಿಸಿದರು.