ರಾಜಕೀಯ

ಕೋಮು ಗಲಭೆ ಸೃಷ್ಟಿಸುವುದೇ ಅಮಿತ್ ಶಾ ಅವರ 'ಸ್ಟಾಂಡರ್ಡ್': ಮುಖ್ಯಮಂತ್ರಿ ಸಿದ್ದರಾಮಯ್ಯ

Manjula VN
ಬೆಂಗಳೂರು: ಕೋಮು ಗಲಭೆಗಳನ್ನು ಸೃಷ್ಟಿಸುವುದೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ 'ಸ್ಟಾಂಡರ್ಡ್' ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಅವಕಾಶಗಳನ್ನು ನೀಡುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವವರ ಹಾಗೂ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ದ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. 
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೋಮು ಗಲಭೆಯನ್ನು ಸೃಷ್ಟಿಸುತ್ತಾರೆಂದು ನಾನು ಹೇಳುತ್ತಿಲ್ಲ. ಆದರೆ, ಕೋಮು ಗಲಭೆ ಸೃಷ್ಟಿಸುವುದು ಅಮಿತ್ ಶಾ ಅವರ ಸ್ಟಾಂಡರ್ಡ್ ಆಗಿದೆ. ಕೋಮು ಗಲಭೆ ಸೃಷ್ಟಿಸುವುದನ್ನು ಬಿಟ್ಟರೆ ಶಾಗೆ ಬೇರೇನೂ ಗೊತ್ತಿಲ್ಲ. ಕೋಮು ಗಲಭೆ ಸೃಷ್ಟಿಸುವುದೇ ರಾಜಕೀಯ ತಂತ್ರವೆಂದು ಅವರು ತಿಳಿದಿದ್ದಾರೆಂದು ತಿಳಿಸಿದ್ದಾರೆ.
ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರ್ಯಾಲಿ ಕುರಿತಂತೆ ಮಾತನಾಡಿದ ಅವರು, ಮೋದಿಯವರ ರ್ಯಾಲಿಯಿಂದ ರಾಜ್ಯದ ಮೇಲೆ ಯಾವುದೇ ರೀತಿಯ ಪರಿಣಾಮಗಳು ಬೀರವುದಿಲ್ಲ. ಬಿಜೆಪಿ ಕೂಡ ಒಂದ ರಾಜಕೀಯ ಪಕ್ಷ. ಮೋದಿ ದೇಶದ ಪ್ರಧಾನಮಂತ್ರಿ. ಪಕ್ಷದ ಪರವಾಗಿ ಮೋದಿಯವರು ರಾಜ್ಯಕ್ಕೆ ಬಂದು ಮತವನ್ನು ಕೇಳುತ್ತಿದ್ದಾರೆ. ಇದರಿಂದ ರಾಜ್ಯದ ಮೇಲೆ ಯಾವುದೇ ರೀತಿಯ ಪರಿಣಾಮಗಳು ಬೀರುವುದಿಲ್ಲ ಎಂದಿದ್ದಾರೆ. 
ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಸುಳ್ಳುಗಳನ್ನು ಹೇಳಿ, ಇತರ ಕುರಿತು ಟೀಕೆಗಳನ್ನು ಮಾಡುವುದರಲ್ಲಿ ಕಾರ್ಯನಿರತವಾಗಿದೆ. ಇದನ್ನು ಬಿಟ್ಟರೆ ಅವರಿಗೆ ಬೇರೇನೂ ಬರುವುದಿಲ್ಲ. ಸುಳ್ಳು ಹೇಳುವುದು ಹಾಗೂ ಟೀಕಿಸುವುದು ಅವರ ಗುಣಗಳಾಗಿವೆ. ಏಕೆಂದರೆ ಬಿಜೆಪಿಯವರು ಜನರ ಪರವಾಗಿಲ್ಲ ಎಂದು ಹೇಳಿದ್ದಾರೆ. 
SCROLL FOR NEXT