ರಾಜಕೀಯ

ಹಲ್ಲೆಗೊಳಗಾದ ವಿದ್ವತ್ ನಮ್ಮ ಪಕ್ಷದ ಕಾರ್ಯಕರ್ತ ಅಲ್ಲ: ಅಮಿತ್ ಶಾ ಯೂಟರ್ನ್

Lingaraj Badiger
ಮಂಗಳೂರು: ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ನಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಬೆಂಗಳೂರಿನ ಮಲ್ಯ ಆಸ್ಪೆತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್ ನಮ್ಮ ಪಕ್ಷದ ಕಾರ್ಯಕರ್ತ ಅಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ಉಲ್ಟಾ ಹೊಡೆದಿದ್ದಾರೆ.
ಸುರತ್ಕಲ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ವಿದ್ವತ್ ನಮ್ಮ ಪಕ್ಷದ ಕಾರ್ಯಕರ್ತನಲ್ಲ. ತಪ್ಪು ಹೇಳಿಕೆಯಿಂದಾಗಿ ಈ ವಿಚಾರ ಚರ್ಚೆಗೆ ಬಂದಿದೆ ಎಂದರು.
ಇಂದು ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಸಮೀಪದ ಕುಲ್ಕುಂದದಲ್ಲಿ ನವಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮಿತ್ ಶಾ, ವಿದ್ವತ್ ನಮ್ಮ ಪಕ್ಷದ ಕಾರ್ಯಕರ್ತನಾಗಿದ್ದು, ಕಾಂಗ್ರೆಸ್ ಶಾಸಕನ ಪುತ್ರ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಶಾಸಕನ ಪುತ್ರ ಅಲ್ಪ ಸಂಖ್ಯಾತ ಎಂಬ ಕಾರಣಕ್ಕೆ ಆತನ ವಿರುದ್ಧ ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ್ದರು ಎಂದು ಆರೋಪಿಸಿದ್ದರು.
ಅಮಿತ್ ಶಾ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್, ಹಲ್ಲೆಗೊಳಗಾದವರನ್ನು ಮತ್ತು ಮೃತಪಟ್ಟವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತದೆ ಎಂದು ತಿರುಗೇಟು ನೀಡಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಓಲೈಕೆ ರಾಜಕಾರಣ ಯಶಸ್ವಿಯಾಗುವುದಿಲ್ಲ. ಅವರ ಓಲೈಕೆ ಮತ್ತು ಧ್ರುವೀಕರಣ ರಾಜಕಾರಣವನ್ನು ಎನ್.ಎ.ಹ್ಯಾರಿಸ್ ಮಗನ ಪ್ರಕರಣದಲ್ಲಿ ಗಮನಿಸಬಹುದು. ಎಮ್ಎಲ್ಎ ಮಗನೊಬ್ಬ ಓರ್ವನ ಮೇಲೆ ಹಲ್ಲೆ ಮಾಡಿದರೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಯಾಕೆ? ಎಂದು ಪ್ರಶ್ನಿಸಿದರು. ಹ್ಯಾರಿಸ್ ಮಗ ಎಂಬ ಕಾರಣಕ್ಕೆ ಮಾತ್ರವಲ್ಲ ಒಂದು ಸಮುದಾಯವನ್ನು ಓಲೈಕೆ ಮಾಡಲು ಅವರು ಹೀಗೆ ಮಾಡಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದರು.
SCROLL FOR NEXT