ಬೆಳಗಾವಿ: ಖಾನಾಪುರದ ಕನಕುಂಬಿ ಗ್ರಾಮದ ಬಳಿ ಕಳಸಾ-ಬಂಡೂರಿ ಯೋಜನೆಯ ಸ್ಥಳಕ್ಕೆ ಗೋವಾ ಸರ್ಕಾರದ ನೀರಾವರಿ ಸಚಿವ ವಿನೋದ್ ಪಾಲೀನ್ಕರ್ ಭೇಟಿ ನೀಡಿದ ಒಂದು ದಿನ ಬಳಿಕ ಇದೀಗ ನಮ್ಮ ರಾಜ್ಯದ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅಲ್ಲಿಗೆ ಭೇಟಿ ನೀಡುವ ನಿರ್ಧಾರ ನಡೆಸಿದ್ದಾರೆ.
ಇಂದು ಸಂಜೆ ಸಚಿವ ಪಾಟೀಲ್ ಕನಕುಂಬಿಗೆ ಹೋಗುವ ನಿರೀಕ್ಷೆಯಿದ್ದು ಅಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ. ನಿನ್ನೆ ಕನಕುಂಪಿಗೆ ಭೇಟಿ ನೀಡಿದ್ದ ಗೋವಾ ಸಚಿವರು ನಂತರ ಕನ್ನಡಿಗರ ಬಗ್ಗೆ ನೀಡಿದ ಹೇಳಿಕೆಯಿಂದ ಎರಡೂ ರಾಜ್ಯಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಇರುವ ಕಳಸಾ ನಾಲಾ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಪಾಲೇಕರ್ ಕರ್ನಾಟಕ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಕನ್ನಡಿಗರು ಹರಾಮಿಗಳು ಎಂದು ನಿನ್ನೆ ಟ್ವೀಟ್ ಮಾಡಿದ್ದರು.
ಗೋವಾದಿಂದ ತೀವ್ರ ಪೊಲೀಸ್ ಭದ್ರತೆಯಲ್ಲಿ ಬಂದಿದ್ದ ಪಾಲೀನ್ಕರ್ ಕರ್ನಾಟಕ ಸರ್ಕಾರದ ಯಾವೊಬ್ಬ ಪ್ರತಿನಿಧಿಗಳಿಗೆ ಹೇಳದೆ ವಾಪಸಾಗಿದ್ದರು. ಇದು ಬೆಳಗಾವಿಯ ಸ್ಥಳೀಯಾಡಳಿತವನ್ನು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.ಶಿಷ್ಟಾಚಾರ ಪಾಲಿಸದೆ ಬಂದು ಹೋದ ಸಚಿವ ಪಾಲೀನ್ಕರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.
ಬೆಳಗಾವಿಯ ಹಿರಿಯ ಕನ್ನಡ ಕಾರ್ಯಕರ್ತ ಅಶೋಕ್ ಚಂಡರಗಿ, ಬೇರೆ ಯಾವುದೇ ರಾಜ್ಯಗಳ ಸಚಿವರು ಭೇಟಿ ನೀಡುವಾಗ ಶಿಷ್ಟಾಚಾರವನ್ನು ಪಾಲನೆ ಮಾಡಬೇಕಾಗುತ್ತದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಆದರೆ ಗೋವಾ ಸಚಿವರು ಕಳ್ಳನಂತೆ ಬಂದು ಹೋಗಿದ್ದಾರೆ ಎಂದು ಆರೋಪಿಸಿದರು.
ಸಾಮರಸ್ಯ ಕಾಪಾಡಲು ಗೋವಾ ಸರ್ಕಾರ ಪ್ರಯತ್ನಪಡುತ್ತಿಲ್ಲ. ಕರ್ನಾಟಕಕ್ಕೆ ನ್ಯಾಯಯುತವಾಗಿ ತನ್ನ ಪಾಲಿನ ನೀರು ಸಿಗಲು ಕರ್ನಾಟಕ ಸರ್ಕಾರ ಕೆಲವು ಆಕ್ರಮಣಕಾರಿ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಅಶೋಕ್ ಚಂಡರಗಿ ಹೇಳುತ್ತಾರೆ.