ಮುಖ್ಯಮಂತ್ರಿ ಸಿದ್ದರಾಮಯ್ಯ-ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೈಲಿಗೆ ಹೋಗಿ ಬಂದವರು. ಇಂದು ಅವರು ಮತ್ತೊಬ್ಬ ಜೈಲು ಪಾಲಾಗಿದ್ದ ವ್ಯಕ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದ್ದಾರೆ.
ಅಮಿತ್ ಶಾ ಅವರು ನಿನ್ನೆ ಸಿದ್ದರಾಮಯ್ಯ ಎಂದರೆ ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರವೆಂದರೆ ಸಿದ್ದರಾಮಯ್ಯ ಎಂದು ನೀಡಿರುವ ಹೇಳಿಕೆಗೆ ಇಂದು ಮುಖ್ಯಮಂತ್ರಿ ಖಾರವಾಗಿ ತಿರುಗೇಟು ನೀಡಿದ್ದಾರೆ.
ಅಮಿತ್ ಶಾ ಅವರ ಭ್ರಷ್ಟಾಚಾರ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ, ಜೈಲಿಗೆ ಹೋಗಿ ಬಂದವರು ನನ್ನ ಮತ್ತು ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ಸೂಕ್ತ ದಾಖಲೆಗಳು ಅಮಿತ್ ಶಾ ಅವರ ಬಳಿಯಿವೆಯೇ? ಸುಳ್ಳು ಹೇಳಿದ ಮಾತ್ರಕ್ಕೆ ಅದರಿಂದ ಲಾಭವಾಗುವುದಿಲ್ಲ. ಈ ರಾಜ್ಯದ ಜನತೆ ಅವರ ಸುಳ್ಳುಗಳನ್ನು ನಂಬುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಗುಜರಾತ್ ನಲ್ಲಿ ಸೊಹ್ರಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ 2010ರಲ್ಲಿ ಅಂದಿನ ಗುಜರಾತ್ ಗೃಹ ಮಂತ್ರಿಯಾಗಿದ್ದ ಅಮಿತ್ ಶಾ ಜೈಲಿಗೆ ಹೋಗಿದ್ದರು. 4 ವರ್ಷಗಳ ನಂತರ ಕೇಸಿನಿಂದ ಅವರನ್ನು ಖುಲಾಸೆ ಮಾಡಲಾಯಿತು.
ಅದೇ ರೀತಿ, ಸಿದ್ದರಾಮಯ್ಯ ಅವರು ಟ್ವೀಟ್ ನಲ್ಲಿ ಅಮಿತ್ ಶಾ ಅವರ ಬಗ್ಗೆ ಮಾತ್ರವಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಂಡಿರುವ ಯಡಿಯೂರಪ್ಪ ಬಗ್ಗೆ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಅಕ್ರಮವಾಗಿ ಭೂಮಿ ಡಿನೋಟಿಫಿಕೇಶನ್ ಮಾಡಿದ್ದ ಆರೋಪದ ಮೇಲೆ ಜೈಲು ಪಾಲಾಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು 2016ರಲ್ಲಿ ಖುಲಾಸೆಗೊಂಡಿದ್ದರು.
ಮುಖ್ಯಮಂತ್ರಿ ಟ್ವೀಟ್ ಮಾಡಿದ ಒಂದು ಗಂಟೆಯಲ್ಲೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಕಾಂಗ್ರೆಸ್ ಪಕ್ಷ ಮಾಜಿ ಜೈಲುವಾಸಿಗಳಿಂದ ಕೂಡಿದೆ. ಭ್ರಷ್ಟಾಚಾರದ ಆರೋಪದ ಮೇಲೆ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಜೈಲು ಪಾಲಾಗಿದ್ದರು. ಇನ್ನು ಅವರ ಮಗ ದಿವಂಗತ ರಾಜೀವ್ ಗಾಂಧಿ ಅವರ ಮಗ ಬೋಫೋರ್ಸ್ ಹಗರಣದಲ್ಲಿ ಜೈಲು ಸೇರಿ ಖಾಯಂ ಆಗಿ ಜೈಲಿನಲ್ಲಿ ಉಳಿಯಬೇಕಾಗಿತ್ತು. ಆದರೆ ದುಃಖದ ವಿಷಯವೆಂದರೆ ನಿಮ್ಮ ಪಕ್ಷದ ಪ್ರಾಯೋಜಕತ್ವದ ಭಯೋತ್ಪಾದನೆ ಅವರನ್ನು ಹತ್ಯೆ ಮಾಡಿತು. ಇನ್ನೂ ಹೆಚ್ಚಿನ ಪಟ್ಟಿ ಬೇಕೆ ಸರ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos