ರಾಜಕೀಯ

ಸ್ವಾರ್ಥಕ್ಕಾಗಿ ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಜನಾರ್ದನ ಪೂಜಾರಿ ಕೈಜೋಡಿಸಿದ್ದಾರೆ: ಅಮೀನ್ ಮಟ್ಟು

Manjula VN
ಮಂಗಳೂರು: ತಮ್ಮ ಸ್ವಾರ್ಥ ಹಾಗೂ ವೈಯಕ್ತಿಕ ರಾಜಕೀಯ ಕಾರಣಗಳಿಗಾಗಿ ಜನಾರ್ದನ ಪೂಜಾರಿಯವರು ಕಲ್ಲಡ್ಕ ಪ್ರಭಾಕರ್ ಅವರೊಂದಿಗೆ ಕೈಜೋಡಿಸಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರು ಮಂಗಳವಾರ ಹೇಳಿದ್ದಾರೆ. 
ಸೌಹಾರ್ದತೆಗಾಗಿ ಕರ್ನಾಟಕ ವತಿಯಿಂದ ನಿನ್ನೆ ನೆಹರೂ ಮೈದಾನದ ಸುತ್ತ ಆಯೋಜಿಸಿದ್ದ ಮಾನವ ಸರಪಳಿಯಲ್ಲಿ ಭಾಗವಹಿಸಿದ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕುದ್ರೋಳಿ ದೇಗುಲದಲ್ಲಿ ಪುಜಾರಿಯವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ವೇಳೆ ಪ್ರಭಾಕರ್ ಭಟ್ ಅವರು ಭಾಗವಹಿಸಿರುವುದಕ್ಕೆ ಅಮೀನ್ ಮಟ್ಟು ತೀವ್ರವಾಗಿ ಕಿಡಿಕಾರಿದರು. ಕುದ್ರೋಳಿ ದೇಗುಲಕ್ಕೆ ಪ್ರಭಾಕರ್ ಭಟ್ ಕಾಲಿಟ್ಟಿರುವುದು ನಾರಾಯಣ ಗುರುಗಳಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದ್ದಾರೆ. 
ಕೋಮು ಗಲಭೆ ಪ್ರಕರಣಗಳಲ್ಲಿ ಬಿಲ್ಲವ ಯುವಕರು ಜೈಲು ಸೇರಲು ಪರೋಕ್ಷವಾಗಿ ಪ್ರಭಾಕರ್ ಭಟ್ ಕಾರಣವಾಗಿದ್ದು. ಇಂತಹ ವ್ಯಕ್ತಿಯೊಂದಿಗೆ ತಮ್ಮ ಸ್ವಾರ್ಥಕ್ಕಾಗಿ ಪೂಜಾರಿಯವರು ಕೈಜೋಡಿಸಿದ್ದಾರೆ. 
ದಕ್ಷಿಣ ಕನ್ನಡ ಜಿಲ್ಲೆಗೆ ಸೌಹಾರ್ತದೆಯ ಬಹಳ ದೊಡ್ಡ ಪರಂಪರೆಯೇ ಇದೆ. ಈ ಸೌಹಾರ್ದತೆಯ ಸರಪಳಿಯನ್ನು ತುಂಡರಿಸುವ ಪ್ರಯತ್ನ ಇತ್ತೀಚೆಗೆ ನಡೆಯುತ್ತಿದೆ. ಪೂಜಾರಿಯವರು ಕಲ್ಲಡ್ಕ ಪ್ರಭಾಕರ್ ಜೊತೆಗೆ ಕೈಜೋಡಿಸಿರುವುದರಿಂದ ನಾಡಿನ ಸೌಹಾರ್ದ ಪರಂಪರೆಗೆ ಧಕ್ಕೆಯಾಗಿದೆ. ಯಾರನ್ನೂ ದೂರ ಇಡಬೇಕೆನ್ನುವುದು ಪೂಜಾರಿಗೆ ಗೊತ್ತಿರಬೇಕಿತ್ತು. ಕಲ್ಲಡ್ಕ ಪ್ರಭಾಕರ್ ಯಾರು ಎನ್ನುವುದನ್ನು ತಿಳಿಯಲು ಇತಿಹಾಸದ ಪುಸ್ತಕಗಳನ್ನು ಓದಬೇಕಿಲ್ಲ. ಇತ್ತೀಚಿನ ಅವರ ಕೆಲವು ಭಾಷಣಗಳನ್ನು ಕೇಳಿದರೂ ಸಾಕು. ಅಂಥಹವರಿಗೆ ನಾರಾಯಣ ಗುರುಗಳ ದೇವಾಲಯಕ್ಕೆ ಕಾಲಿಡಲು ಯಾವ ನೈತಿಕ ಹಕ್ಕಿದೆ ಎಂದು ಮಟ್ಟು ಪ್ರಶ್ನಿಸಿದ್ದಾರೆ. 
SCROLL FOR NEXT