ಬೆಂಗಳೂರು: ಹೊಸದಾಗಿ ನೇಮಕವಾದ ಸಚಿವರೊಂದಿಗೆ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ಅನೌಪಚಾರಿಕ ಸಂಪುಟ ಸಭೆ ನಡೆಸಿ ಮುಂದಿನ ಐದು ವರ್ಷಗಳಲ್ಲಿ ಉತ್ತಮ ಆಡಳಿತ ನೀಡುವ ವಿಶ್ವಾಸ ವ್ಯಕ್ತ ಪಡಿಸಿದರು.
ಸಂಪುಟ ವಿಸ್ತರಣೆ ವಿಳಂಬವಾಗಿದ್ದು ಸರ್ಕಾರ ನೆಲೆಗೊಳ್ಳಲು ಸ್ವಲ್ಪ ಸಮಯಾವಕಾಶ ನೀಡಬೇಕೆಂದು ಮಾಧ್ಯಮಗಳು ಮತ್ತು ಜನತೆಯಲ್ಲಿ ಕೋರಿದರು.
ಎರಡು ಪಕ್ಷಗಳು ಸೇರಿ ಸರ್ಕಾರ ರಚಿಸಿರುವುದರಿಂದ ಯಾವುದೇ ನಿರ್ಧಾರವನ್ನು ಒಮ್ಮೆಲೆ ತೆಗೆದುಕೊಳ್ಳಲಾಗುವುದಿಲ್ಲ, ನಿರ್ಧಾರಗಳನ್ನು ಕೈಗೊಳ್ಳಲು ನಮಗೆ ಸಮಯಾವಾಕಾಶ ಬೇಕು, ಸಚಿವರು ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಮಾಡಬೇಕು ಎಂದು ಸಿಎಂ ಹೇಳಿದ್ದಾರೆ.
ನಾವು ಇನ್ನೂ 7 ಸಚಿವ ಸ್ಥಾನಗಳನ್ನು ಖಾಲಿ ಉಳಿಸಿಕೊಂಡಿದ್ದೇವೆ ಎಂದು ಹೇಳಿದ ಅವರು ಸಭೆಯಲ್ಲಿ ಯಾರಿಗೆ ಯಾವ ಖಾತೆ ಎಂಬುದನ್ನು ಬಹಿರಂಗ ಪಡಿಸಲಿಲ್ಲ. ಎಲ್ಲಾ ಶಾಸಕರು ಸಚಿವರಾಗಲು ಅರ್ಹರಾಗಿದ್ದಾರೆ, ಆಕಾಂಕ್ಷಿಗಳಲ್ಲಿ ಅಸಮಾಧಾನ ಮೂಡುವುದು ಸಾಮಾನ್ಯ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು, ವಿಧಾನಸಭೆ ಚುನಾವಣೆ ವೇಳೆ ಎರಡೂ ಪಕ್ಷಗಳು ಎರಡು ಪ್ರತ್ಯೇಕ ಪ್ರಣಾಳಿಕೆಗಳನ್ನು ಜನರ ಮುಂದೆ ಇಟ್ಟಿದ್ದವು. ಈಗ ಎರಡೂ ಪ್ರಣಾಳಿಕೆಗಳು ಮುಖ್ಯ ಅಂಶಗಳನ್ನು ಸೇರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಗುರುತಿಸಿ ಅನುಷ್ಠಾನಗೊಳಿಸುತ್ತೇವೆ ಎಂದರು.
ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸುವುದು ಹಲವು ಕಾಂಗ್ರೆಸ್ ಶಾಸಕರಿಗೆ ಇಷ್ಟವಿರಲಿಲ್ಲ, ರಾಜ್ಯದ ಜನತೆಯೇ ಅವರನ್ನು ತಿರಸ್ಕರಿಸಿದ ಮೇಲೆ ಅವರ ಜೊತೆ ಹೋಗಿ ಕಾಂಗ್ರೆಸ್ ಸರ್ಕಾರ ರಚಿಸಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷವನ್ನು ಕೂಡ ತಿರಸ್ಕರಿಸಿದ್ದಾರೆ, 120 ಇದ್ದ ಶಾಸಕರ ಸಂಖ್ಯೆ 78ಕ್ಕೆ ಕುಸಿದಿದೆ. 38 ಸೀಟು ಗೆದ್ದ ಜೆಡಿಎಸ್ ಸರ್ಕಾರ ರಚಿಸಿದೆ. ಸಮ್ಮಿಶ್ರ ಸರ್ಕಾರ ಸಂಪುಟ ರಚನೆ ಮಾಡಲು ಇಷ್ಟು ದಿನ ವ್ಯರ್ಥ ಮಾಡಿದೆ, ಈಗ ಖಾತೆ ಹಂಚಿಕೆ ಡಿಲೀಂಗ್ ನಲ್ಲಿ ತೊಡಗಿದೆ. ರಾಜ್ಯದಲ್ಲಿ ಸರ್ಕಾರ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos