ದಿನೇಶ್ ಗುಂಡೂರಾವ್, ಬಿ,ಕೆ ಹರಿ ಪ್ರಸಾದ್ ಮತ್ತು ಕೆ.ಎಚ್ ಮುನಿಯಪ್ಪ
ಬೆಂಗಳೂರು: ಸಚಿವ ಸ್ಥಾನ ಸಿಗದೇ ಅಸಮಾಧಾನ ಗೊಂಡಿರುವ ಕೆಲ ಶಾಸಕರ ಭಿನ್ನಮತ ಇನ್ನೂ ತಣ್ಣಗಾಗಿಲ್ಲ, ಹೀಗಿರುವಾಗಲೇ ಕೆಪಿಸಿಸಿ ಹುದ್ದೆಗಾಗಿ ಲಾಬಿ ಆರಂಭವಾಗಿದೆ. ಜೂನ್ 14 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ರಾಜ್ಯ ಕಾಂಗ್ರೆಸ್ ಮುಖಂಡರು ಈ ಸಂಬಂಧ ಚರ್ಚೆ ನಡೆಸಲಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅಧ್ಯಕ್ಷ ಹುದ್ದೆಗೆ ಸಮೀಪದಲ್ಲಿದ್ದಾರೆ. ಈ ಸಂಬಂದ ಅವರು ರಾಹುಲ್ ಗಾಂಧಿ ಜೊತೆ ಚರ್ಚೆ ಕೂಡ ನಡೆಸಿದ್ದರು. ಆದರೆ ಇದ್ದಕ್ಕಿದ್ದಂತೆ ಅಧ್ಯಕ್ಷ ಹುದ್ದೆಗೆ ಬಿರುಸಿನ ಲಾಬಿ ಆರಂಭವಾಗಿದೆ. ಜಾತಿ ಲೆಕ್ಕಾಚಾರದಲ್ಲಿ ಕೆಪಿಸಿಸಿ ಹುದ್ದೆ ಪಡೆಯಲು ಹಲವು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿ ಪ್ರಸಾದ್, ಹಾಗೂ ಪಕ್ಷದ ಹಿರಿಯ ಮುಖಂಡ ಕೆ.ಎಚ್ ಮುನಿಯಪ್ಪ ಹೆಸರುಗಳು ಕೇಳಿ ಬರುತ್ತಿವೆ. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರುಗಳು ಕೂಡ ಕೇಳಲ್ಪಡುತ್ತಿದೆ.
ದಿನೇಶ್ ಗುಂಡೂರಾವ್ ಅವರ ಪರ ಜಾತಿ ಲೆಕ್ಕಾಚಾರ ಕೆಲಸ ಮಾಡುವ ಸಾಧ್ಯತೆಯಿದೆ, ಪಕ್ಷದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಬ್ರಾಹ್ಮಣ ನಾಯಕರಿದ್ದಾರೆ,
ಇನ್ನೂ ಹಿಂದುಳಿದ ವರ್ಗಕ್ಕೆ ಸೇರಿದ ಬಿ.ಕೆ ಹರಿಪ್ರಸಾದ್ ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಡಿಸಿಎಂ ಪರಮೇಶ್ವರ್ ಜೊತೆ ಭಾನುವಾರ ನಡೆದ ರಾಜ್ಯ. ಕಾಂಗ್ರೆಸ್ ಸಂಸದರ ಸಭೆಯಲ್ಲಿ ಹರಿ ಪ್ರಸಾದ್ ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹರಿಪ್ರಸಾದ್ ಜೊತೆಗೆ ತಾವು ಕೂಡ ಕೆಪಿಸಿಸಿ ರೇಸ್ ನಲ್ಲಿರುವುದಾಗಿ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ, ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ್ ದಲಿತರಾಗಿದ್ದು, ಮುನಿಯಪ್ಪ ದಲಿತರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಬೆಂಬಲ ವ್ಯಕ್ತವಾಗುವ ಸಾಧ್ಯತೆಯಿದೆ.
ಕೆಪಿಸಿಸಿ ಹುದ್ದೆಗೆ ಸಿದ್ದರಾಮಯ್ಯ ಅವರ ಹೆಸರನ್ನು ಕೆಲ ಬೆಂಬಲಿಗರು ತೇಲಿ ಬಿಟ್ಟಿದ್ದಾರೆ. ಹೀಗಾಗಿ ಸೋಮವಾರದಿಂದ ಕೆಪಿಸಿಸಿ ಅಧ್ಯಕ್ಷ ಆಯ್ಕೆ ವಿಚಾರ ಮತ್ತಷ್ಟು ಕುತೂಹಲ ಮೂಡಿಸಿದೆ, ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ. ಪರ ಹಲವರು ಒಲವು ತೋರಿದ್ದಾರೆ, ಒಂದು ವೇಳೆ ಸಿದ್ದರಾಮಯ್ಯ ಪಕ್ಷದ ಅಧ್ಯಕ್ಷರಾದರೇ ನಮಗೆ ತುಂಬಾ ಸಂತೋಷವಾಗುತ್ತದೆ, ಸಿದ್ದರಾಮಯ್ಯ ಕೇವಲ ಒಂದೇ ಒಂದು ಸಮುದಾಯದ ನಾಯಕರಲ್ಲ, ಇಡೀ ರಾಜ್ಯಕ್ಕೆ ಅವರು ನಾಯಕ ಎಂದು ಶಾಸಕ ಭೈರತಿ ಸುರೇಶ್ ಹೇಳಿದ್ದಾರೆ.
ಸಚಿವ ಸ್ಥಾನ ವಂಚಿತರಾಗಿರುವ ದಿನೇಶ್ ಗಂಡೂರಾವ್ ಎಲ್ಲಾ ಬೆಳವಣಿಗೆಗಳ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡುತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಾನು ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ. ನನ್ನ ಅನುಭವವನ್ನು ಹೈ ಕಮಾಂಡ್ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತದೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos