ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ನನ್ನ ಸಮಸ್ಯೆ ಒಂದೇ. ಇಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಅವರು ಕಣ್ಣೀರು ಹಾಕುತ್ತಾರೆ, ನಾನು ಅಳುವುದಿಲ್ಲ ಅಷ್ಟೇ ವ್ಯತ್ಯಾಸ ಎಂದು ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೋಳಿ ಹೇಳಿದ್ದಾರೆ.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ತಮಗೆ ಸಚಿವ ಸ್ಥಾನ ಕೈತಪ್ಪಿದ ಕುರಿತಂತೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನಿಡಿದ ಸತೀಶ್ ಜಾರಕಿಹೋಳಿ "ತಮಗೆ ಸಚಿವಸ್ಥಾನ ಕೈತಪ್ಪಲು ಪ್ರಭಾವಿಗಳು ಕಾರಣವೆಂದು ಅವರು ಹೇಳುತ್ತಾರೆ. ನಾನೂ ಅದನ್ನೇ ಹೇಳುತ್ತೇನೆ. ಹೀಗಾದಾಗ ಯಾರು ಯಾರಿಗೆ ಸಚಿವ ಸ್ಥಾನ ತಪ್ಪಿಇಸಿದ್ದಾರೆ ಎನ್ನುವ ಪ್ರಶ್ನೆ ಹುಟ್ಟುವುದಿಲ್ಲ. ಈಗ ನಾವಿಬ್ಬರೂ ಸೇರಿ ಮಗೆ ಸಚಿವ ಸ್ಥಾನ ತಪ್ಪಿಸಿದವರು ಯಾರು ಎಂದು ಹುಡುಕಬೇಕಿದೆ" ಎಂದರು.
ಬೆಳಗಾವಿಯ ತಮ್ಮ ನಿವಾಸದಲ್ಲಿ ಸತೀಶ್ ಜಾರಕಿಹೋಳಿ ಮಾತನಾಡಿದರು.
"ಸಚಿವ ಸ್ಥಾನ ನೀಡುವಲ್ಲಿ ಮಾಡಲಾದ ತಾರತಮ್ಯದ ಕುರಿತಂತೆ ಈಗಾಗಲೇ ನಾಯಕರ ಗಮನಕ್ಕೆ ತಂದಿದ್ದೇನೆ. ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ, ಕಾರ್ಯಕರ್ತರು, ಬೆಂಬಲಿಗರ ಒತ್ತಾಯಕ್ಕೆ ಕಟ್ಟುಬಿದ್ದು ನಾನು ರಾಜೀನಾಮೆ ಸಲ್ಲಿಸಿದ್ದೇನೆ.
"ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಗೆ ಇನ್ನೂ 6 ಸಚಿವ ಸ್ಥಾನ ಸಿಗಬೇಕು. ಮುಂದಿನ ಹಂತದಲ್ಲಿ ಅದನ್ನು ಭರ್ತಿ ಮಾಡುವವರಿದ್ದಾರೆ. ಆದರೆ ನಾನು ಎರಡನೇ ಹಂತದಲ್ಲಿ ಸಚಿವ ಸ್ಥಾನ ಬೇಡ ಎಂದಿದ್ದೇನೆ. ಇದಕ್ಕೆ ಬದಲಾಗಿ ನನ್ನ ಬೆಂಬಲಿಗರಾದ 15 ಶಾಸಕರ ಪೈಕಿ ಯಾರಿಗಾದರೂ ಮಂತ್ರಿಗಿರಿ ಕೊಡಿಸಲು ಪ್ರಯತ್ನಿಸುತ್ತೇನೆ" ಅವರು ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರಕ್ಕೆ ಯಾವ ತೊಂದರೆ ಇಲ್ಲ ಎಂದ ಶಾಸಕರು ಶುಕ್ರವಾರ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸಮ್ಮುಖದಲ್ಲಿ ಬೆಂಗಳೂರಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.
"ಪಕ್ಷದಲ್ಲಿ ಉಂಟಾದ ಸಮಸ್ಯೆಗಳೇನೂ ಬಗೆಹರಿಯಲಾರದ ಸಮಸ್ಯೆಗಳಲ್ಲ. ಎಲ್ಲವೂ ಬಗೆಹರಿಯಲಿದೆ. ಆದರೆ ನಾನು ರಾಜೀನಾಮೆ ಸಲ್ಲಿಸಿದ ಸಂಬಂಧ ಕೆಲವರು ನನ್ನೊಡನೆ ಮಾತನಾಡಿ ಮನವೊಲಿಕೆಗೆ ಯತ್ನಿಸಿದ್ದಾರೆ. ಆದರೆ ನನ್ನ ನಿರ್ಧಾರದಿಂದ ನಾನು ಹಿಂದೆ ಸರಿಯುವುದಿಲ್ಲ" ಜಾರಕಿಹೋಳಿ ತಿಳಿಸಿದರು
ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರೆಂದು ಗುರುತಿಸಿಕೊಂಡಿರುವ ಸತೀಶ್ ಜಾರಕಿಹೋಳಿ ಬೆಳಗಾವಿಯ ಯಮಕನಮರಡಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos