ಉಡುಪಿ: ಉಡುಪಿಯ ಅಷ್ಠ ಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ತಾವು ರಾಜಕೀಯಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ತಾನು ಎಂದು ಅವರು ಹೇಳಿದ್ದಾರೆ.
ಉಡುಪಿಯ ಹಿರಿಯಡ್ಕದಲ್ಲಿರುವ ಶೀರೂರು ಮೂಲ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಸ್ವಾಮೀಜಿ ಶ್ರೀಕೃಷ್ಣ ಮುಖ್ಯಪ್ರಾಣರ ಅನುಗ್ರಹದಿಂದ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ತಾನು ತೀರ್ಮಾನಿಸಿದ್ದೇನೆ. ಬಿಜೆಪಿ ಪಕ್ಷದ ಟಿಕೆಟ್ ಸಿಕ್ಕರೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ. ಇಲ್ಲವಾದರೆ ಪಕ್ಷೇತರನಾಗಿ ಕಣಕ್ಕಿಳಿಯುವುದು ಖಚಿತ' ಎಂದಿದ್ದಾರೆ.
"ನನಗೆ ಯೋಗಿ ಆದಿತ್ಯನಾಥ್ ಮಾದರಿಯಾಗಿದ್ದಾರೆ. ಮಠಾಧೀಶರು ರಾಜಕೀಯ ಮಾಡಬಾರದೆಂದು ಏನಿಲ್ಲ. ಇಷ್ಟಕ್ಕೂ ಜನಪ್ರತಿನಿಧಿಗಳು ಜನರ ನಿರೀಕ್ಷೆಯ ಮಟ್ಟಕ್ಕೆ ಕೆಲಸ ಮಾಡುತ್ತಿಲ್ಲ, ಇದಕ್ಕಾಗಿ ನಾವು ಚುನಾವಣೆಗೆ ನಿಲ್ಲುತ್ತಿದ್ದೇವೆ" ಶ್ರೀಗಳು ಹೇಳಿದರು.
"ನಾನು ರಾಜಕೀಯ ಪ್ರವೇಶದ ಸಂಬಂಧ ಯಾವ ಯತಿಗಳ ಸಲಹೆಯನ್ನೂ ಪಡೆದಿಲ್ಲ. ಅಷ್ಟಮಠಗಳಿಗೆ ನನ್ನ ರಾಜಕೀಯ ಸ್ಪರ್ಧೆ ಇಷ್ಟವುಂಟೋ ಇಲ್ಲವೋ ಗೊತ್ತಿಲ್ಲ. ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸಹಿತ ಯಾರ ಸಲಹೆಯನ್ನೂ ಪಡೆದಿಲ್ಲ" ಎಂದ ಶ್ರೀಗಳು ನ್ಯಾಸಿಗಳ ರಾಜಕೀಯ ಸ್ಪರ್ಧೆಯಿಂದ ಯಾವುದೇ ಧರ್ಮ ಉಲ್ಲಂಘನೆಯಾಗದು, ಇದು ಸಾಗರೋಲ್ಲಂಘನವಲ್ಲ. ಇಲ್ಲೇ ಇದ್ದು ಜನಸೇವೆ ಮಾಡುವೆವು. ಬೆಂಗಳೂರಲ್ಲಿ ಕೇಂದ್ರಿತವಾಗಿರುವ ಆಡಳಿತವನ್ನೇ ಇಲ್ಲಿಗೆ ತರುತ್ತೇವೆ" ಎಂದು ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos