ಉಡುಪಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ದಿಸಲು ಟಿಕೆಟ್ ಪಡೆಯಲು ಆಕಾಂಕ್ಷಿಗಳು ಮುಗಿ ಬೀಳುತ್ತಿದ್ದಾರೆ. ಆದರೆ ಉಡುಪಿ ವಿಧಾನಸಭೆ ಕ್ಷೇತ್ರದಲ್ಲಿ ಕೂತೂಹಲಕಾರಿ ಬೆಳವಣಿಗೆಯೊಂದು ಸದ್ದಿಲ್ಲದೇ ನಡೆದಿದೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಚುನಾವಣಾ ಪ್ರಚಾರಕ್ಕಾಗಿ ನಿರ್ಮಿಸಲಾಗಿರುವ ಪ್ರಚಾರ ವಾಹನ ಎಲ್ಲರ ಗಮನ ಸೆಳೆಯುತ್ತಿದ್ದು, ಈ ವಾಹನದಲ್ಲಿ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಕಾಂಗ್ರೆಸ್ ಚಿಹ್ನೆ ಯಾವುದು ಇಲ್ಲದ ಕಾರಣ ಪ್ರಶ್ನೆ ಎದ್ದಿದೆ.
ಇಲಾಖೆಯ ಮಾಹಿತಿಯಾಗಲೀ, ರಾಜ್ಯ ಸರಕಾರದ ಕಲ್ಯಾಣ ಯೋಜನೆಗಳಾಗಲೀ ಈ ಪ್ರಚಾರ ವಾಹನದಲ್ಲಿಲ್ಲ. ಬದಲಾಗಿ ವಾಹನದ ಹೋರ್ಡಿಂಗ್ ಗಳಲ್ಲಿ ಸಚಿವರೇ ಮಿಂಚುತ್ತಿದ್ದಾರೆ. ಫೋಟೋದ ಜೊತೆಗೆ ಅಭಿವೃದ್ದಿಯೊಂದಿಗೆ ನನ್ನ ಹೆಜ್ಜೆ, ಜೊತೆಗಿರಲಿ ನಿಮ್ಮ ಹೆಜ್ಜೆ ಎಂಬ ಬರಹಗಳಿವೆ. ಇದು ಎಲ್ಲರ ಗಮನ ಸೆಳೆಯುತ್ತಿದೆ.
ಎಲ್ಲಿಯೂ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಪ್ರಯತ್ನ ಈ ವಾಹನದಲ್ಲಿಲ್ಲ. ಕೆಲ ತಿಂಗಳುಗಳಿಂದ ಸಚಿವ ಮಧ್ವರಾಜ್ ಬಿಜೆಪಿ ಸೇರ್ಪಡೆ ಸುದ್ದಿಗೆ ರೆಕ್ಕೆ ಪುಕ್ಕ ಬಂದಿತ್ತು. ಈ ಕಾರಣಕ್ಕಾಗಿಯೇ ಸಚಿವರು ರಾಜ್ಯ ಸರಕಾರದ ಸಾಧನೆಗಳನ್ನು ಬಿಂಬಿಸಲಿಲ್ಲವೇ ಎಂಬ ಅನುಮಾನಗಳು ಮೂಡಿವೆ.
ಬಿಜೆಪಿ ಸೇರುವುದು ಜೋಕ್. ಇದು ಬರೀ ಅಪಪ್ರಚಾರ. ಅವರು ಕಾಂಗ್ರೆಸ್ ನಲ್ಲೇ ಇದ್ದಾರೆ. ಮುಂದೆಯೂ ಇರುತ್ತಾರೆ ಎಂದು ಹೇಳಿದ್ದಾರೆ. ಬಿಜೆಪಿಯವರು ಬರೀ ಅಪ ಪ್ರಚಾರ ಮಾಡುವುದನ್ನು ಬಿಡಿ ಅಂತ ಹೇಳಿದ್ದಾರೆ.
ತಮ್ಮ ವಾಹನವನ್ನು ತಮ್ಮ ಅಭಿಮಾನಿಗಳು ತಯಾರಿಸಿದ್ದು, ಅವರ ಸ್ವಂತ ಖರ್ಚಿನಲ್ಲಿ ಸಿದ್ದಪಡಿಸಿದ್ದಾರೆ. ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಅವರ ಜೊತೆಗಿರುವ ವಿಡಿಯೋ ಕೂಡ ಇದೆ. ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಊಹಾಪೋಹಾ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos