ಕರ್ನಾಟಕ ಚುನಾವಣೆ: ಜೆಡಿಎಸ್ ಪಾಲಿಗೆ ಮಾಡು ಇಲ್ಲವೆ ಮಡಿ ಹೋರಾಟ!
ಮೈಸೂರು: ಮೇ 12ರಂದು ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆ ಜೆಡಿಎಸ್ ಪಾಲಿಗೆ ಮಾಡು ಇಲ್ಲವೇ ಮಡಿ ಚುನಾವಣೆ ಎನಿಸಲಿದೆ. ಹೆಚ್ ಡಿ ದೇವೇಗೌಡ ಹಾಗೂ ಅವರ ಪುತ್ರ ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ. ಕುಮಾರಸ್ವಾಮಿ ನಾಯಕತ್ವದ ಜೆಡಿಎಎಸ್ ಕಳೆದ 12 ವರ್ಷಗಳಿಂದ ಅಧಿಕಾರ ಕಳೆದುಕೊಂಡಿದ್ದು ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ಜತೆಜತೆಗೇ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಹೆಣಗಾಡುತ್ತಿದೆ.
ಒಕ್ಕಲಿಗರ ಪ್ರಬಲ ಬೆಂಬಲ, ಸಹಕಾರದಿಂದ 2013ರಲ್ಲಿ ಜೆಡಿ (ಎಸ್20.2 ಶೇ ಮತಗಳೊಡನೆ 40 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಈಗ ಈ ಸ್ಥಾನಗಳನ್ನು ಪಕ್ಷ ತನ್ನಲ್ಲೇ ಉಳಿಸಿಕೊಳ್ಳುವುದಕ್ಕಾಗಿ ಕಠಿಣ ಪರಿಶ್ರಮ ಹಾಕಬೇಕಿದೆ. ಪ್ರಮುಖವಾಗಿ ಪಕ್ಷದಲ್ಲಿ ನಾಯಕರ ಕೊರತೆ ಇರುವುದಲ್ಲದೆ ಒಂದು ಸಮುದಾಯಕ್ಕಷ್ಟೇ ಸೀಮಿತಗೊಂಡಿದೆ. ದೇವೇಗೌಡರ ಕುಟುಂಬದಲ್ಲಿಯೂ ಸಾಕಷ್ಟು ಅಪೇಕ್ಷಿತ ನಾಯಕರಿಲ್ಲ ಎನ್ನಲಾಗುತ್ತಿದೆ.
ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪಕ್ಷವು ಸಮರ್ಥಿಸಿದೆ. ಇನ್ನು ಉತ್ತರ ಕರ್ನಾಟಕ ಜನರ ಪಾಲಿಗೆ ಮಹತ್ವದ್ದಾದ ಮಹದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ನ್ಯಾಯ ದೊರಕುವಂತೆ ಮಾಡಲು ಪಕ್ಷವು ಹೋರಾಟಕ್ಕಿಳಿದಿದೆ. ಇದಲ್ಲದೆ ರೈತರ ಆತ್ಮಹತ್ಯೆ ಸಂಬಂಧ ರಾಜ್ಯ ಸರ್ಕಾರದ ಗಮನ ಸೆಳೆದಿದೆ ಈ ಎಲ್ಲದರಿಂದಾಗಿ ಜೆಡಿಎಸ್ ರೈತ ಸಮುದಾಯದೊಡನೆ ಉತ್ತಮ ಸಂಪರ್ಕ ಬೆಳೆಸಿಕೊಳ್ಳುತ್ತಿದೆ.
ಆದರೆ ಕಳೆದ ಬಾರಿ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದ್ದ ಕುಮಾರಸ್ವಾಮಿ ತಮ್ಮ ಇಪ್ಪತ್ತು ತಿಂಗಳ ಆಡಳಿತಾವಧಿಯ ಬಳಿಕ ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟಿರಲಿಲ್ಲ. ಇದು ಪ್ರಬಲ ಲಿಂಗಾಯತ, ವೀರಶೈವ ಸಮುದಾಯ ಜೆಡಿಎಸ್ ನಿಂದ ದೂರ ಉಳಿಯುವಂತೆ ಮಾಡಿದೆ. ಇದಾಗಿ ಹಲವು ಬಾರಿ ಕುಮಾರಸ್ವಾಮಿ ತಾವು ಮಾಡಿದ ಅಚಾತುರ್ಯಕ್ಕೆ ಬಹಿರಂಗ ಕ್ಷಮೆ ಕೇಳಿದ್ದರೂ ಸಹ ಇಂದಿಗೂ ಜನರ ಮನದಲ್ಲಿ ಕುಮಾರಸ್ವಾಮಿ ಕುರಿತಂತೆ ಅದೊಂದು ಕಹಿ ಘಟನೆ ಹಾಗೆಯೇ ಉಳಿದುಹೋಗಿದೆ.
ಈ ಬಾರಿ ಬೈಪಾಸ್ ಸರ್ಜರಿ ಮಾಡಿಸಿಕೊಂಡಿರುವ ಕುಮಾರಸ್ವಾಮಿ ತಮ್ಮ ಪಕ್ಷದ ಪ್ರಚಾರ ಕಾರ್ಯದ ಭಾಗವಾಗಿ ’ಕುಮಾರ ಪರ್ವ ವಿಕಾಸ ಯಾತ್ರೆ’ ಹಮ್ಮಿಕೊಂಡಿದ್ದರು. "ಜನರು ಬಿಜೆಪಿ ಹಾಗೂ ಕಾಂಗ್ರೆಸ್ ನ ಪರ್ಯಾಯವನ್ನು ಎದುರು ನೋಡುತ್ತಿದ್ದಾರೆ" ಎಂದು ಕುಮಾರಸ್ವಾಮಿ ಈ ವೇಳೆ ಹೇಳಿಕೆ ನಿಡಿದ್ದರು.
ಇನ್ನು ಹಿಂದುಳಿದ ವರ್ಗಗಳ ಬೆಂಬಲವಿಲ್ಲದೆ ಹೋದಲ್ಲಿ ಪಕ್ಷಕ್ಕೆ ದೊಡ್ಡ ಗೆಲುವು ಲಭಿಸುವುದು ಕಠಿಣವಾಗಲಿದೆ ಎಂದು ಅರಿತ ದೇವೇಗೌಡ ಅವರು ಬಹುಜನ ಸಮಾಜವಾದಿ ಪಕ್ಷದೊಡನೆ ಮೈತ್ರಿ ಮಾಡಿಕೊಂಡಿದ್ದಾರೆ. ಮಾಯಾವತಿ ನಾಯಕತ್ವದ ಬಿಎಸ್ಪಿ ಕರ್ನಾಟಕದಲ್ಲಿ ಬಲವಾಗಿ ಬೇರೂರಿರದೆ ಹೋದರೂ ಕನಿಷ್ಟ ಶೇ.2ರಷ್ಟು ಮತಗಳೂ ಜೆಡಿಎಸ್ ಗೆ ಅನುಕೂಲವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಈ ಹಿಂದೆ ಬಿಜೆಪಿಯೊಡನೆ ಕೈಜೋಡಿಸಿದ್ದ ಜೆಡಿಎಸ್ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗಳಲ್ಲಿ ತಟಸ್ಥವಾಗುಳಿವ ಮೂಲಕ ಕಾಂಗ್ರೆಸ್ ಗೆ ಅನುಕೂಲ ಮಾಡಿತ್ತು. ಆದರೆ ಪಕ್ಷದ ರಾಜಕೀಯ ನಿಷ್ಠೆಯ ಕುರಿತಂತೆ ಜನರಲ್ಲಿ ಅನುಮಾನಗಳನ್ನು ಸೃಷ್ಟಿಸಿತು
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos