ವಿಜಯಪುರ: ಸಿಎಂ ಸಿದ್ದರಾಮಯ್ಯ ಸೋಲಿನ ಭೀತಿಯಿಂದಾಗಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿದ್ದ ಪ್ರಧಾನಿ ಮೋದಿ ಅವರ ಹೇಳಿಕೆ ತತ್ ಕ್ಷಣವೇ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ನೀವೂ ಕೂಡ ಭಯದಿಂದಾಗಿ ಲೋಕಸಭಾ ಚುನಾವಣೆಲ್ಲಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದಿರೇ ಮಿಸ್ಟರ್ ಪ್ರಧಾನಿ ಎಂದು ವ್ಯಂಗ್ಯವಾಡಿದ್ದಾರೆ.
ಅತ್ತ ಮೈಸೂರಿನ ಹೊರವಲಯದ ಸಂತೇಮರಹಳ್ಳಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಷಣ ಮುಕ್ತಾವಾಗುತ್ತಿದ್ದಂತೆಯೇ ಇತ್ತ ಟ್ವಿಟರ್ ನಲ್ಲಿ ಪ್ರತ್ಯಕ್ಷವಾಗಿರುವ ಸಿಎಂ ಸಿದ್ದರಾಮಯ್ಯ ಮತ್ತೆ ಪ್ರಧಾನಿ ಮೋದಿ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.
ನೀವೂ ಕೂಡ ಸೋಲಿನ ಭೀತಿಯಿಂದಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಮತ್ತು ವಡೋದರಾ ಎರಡು ಲೋಕಸಭಾ ಕ್ಷೇತ್ರಗಿಳಿಂದ ಸ್ಪರ್ಧಿಸಿದಿರೇ ಮಿಸ್ಟರ್ ಪ್ರಧಾನಿ? ಖಂಡಿತಾ ನೀವು 56 ಇಂಚಿನ ಮನುಷ್ಯ..ನನ್ನ ಪ್ರಶ್ನೆಗೆ ನಿಮ್ಮ ಬಳಿ ಬುದ್ದಿವಂತ ವಿವರಣೆ ಇರುತ್ತದೆ. 2 ಕ್ಷೇತ್ರಗಳ ವಿಚಾರ ಬಿಡಿ ಮಿಸ್ಟರ್ ಮೋದಿ, ನಿಮ್ಮ ಪಕ್ಷ 60-70 ಸೀಟುಗಳಿಗೂ ಅಧಿಕ ಸ್ಥಾನ ಪಡೆಯುವುದಿಲ್ಲ. ಈ ಬಗ್ಗೆ ಕೊಂಚ ಯೋಚನೆ ಮಾಡಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ತಮ್ಮ ಮತ್ತು ಮಾಜಿ ಶಾಸಕ ಜಮೀರ್ ಅಹ್ಮದ್ ಅವರ ಪಾಕಿಸ್ತಾನ ಪ್ರವಾಸದ ಕುರಿತ ಸುಳ್ಳುಸುದ್ದಿಯನ್ನು ಪರೋಕ್ಷವಾಗಿ ಉಲ್ಲೇಖ ಮಾಡಿರುವ ಸಿಎಂ ಸಿದ್ದರಾಮಯ್ಯ, ಕೆಲವು ಬೃಹಸ್ಪತಿಗಳು ಕರ್ನಾಟಕ ಚುನಾವಣೆಗೆ ಪಾಕಿಸ್ತಾನದ ಸಂಬಂಧ ನೀಡುತ್ತಿದ್ದಾರೆ. ನಾನು ಯಾವುದೇ ದೇಶಕ್ಕೂ ಹೋಗಿಲ್ಲ. ಕಳೆದ ಎರಡು ವರ್ಷಗಳಲ್ಲಿ ನಾನು ಕೇವಲ 2 ದೇಶಗಳಿಗೆ ಭೇಟಿ ನೀಡಿದ್ದು, ನನ್ನ ಮಗ ರಾಕೇಶ್ ನ ಪಾರ್ಥೀವ ಶರೀರ ಭಾರತಕ್ಕೆ ವಾಪಸ್ ತರಲು ಮತ್ತು ಅನಿವಾಸಿ ಕನ್ನಡಿಗರ ಅಸೋಸಿಯೇಷನ್ ಉದ್ಘಾಟನೆ ಮಾಡಲು ದುಬೈಗೆ ತೆರಳಿದ್ದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.