ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೇವಾಲಾ
ಬೆಂಗಳೂರು: ಬಿಜೆಪಿ ಎಂದರೆ ಭ್ರಷ್ಟ ಜನಾರ್ಧನ ಪಕ್ಷ, ಮಾಜಿ ಸಚಿವ ಜನಾರ್ಧನ ರೆಡ್ಡಿ ಸಹೋದರಹರು ಹಾಗೂ ಸಂಬಂಧಿಗಳಿಗೆ 8 ಕ್ಷೇತ್ರಗಳ ಟಿಕೆಟ್ ನೀಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಬಳ್ಳಾರಿ ರಿಪಬ್ರಿಕ್'ಗೆ ಆಶೀರ್ವದಿಸಿದ್ದಾರೆಂದು ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಂಗಳವಾರ ಹೇಳಿದ್ದಾರೆ.
ಮಂಗಳವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿರುವ ಅವರು, ಮೋದಿ ಮತ್ತು ಅಮಿತ್ ಶಾ ಜೋಡಿ ಒಂದು ಕಡೆ, ರೆಡ್ಡಿ ಗ್ಯಾಂಗ್ ಮತ್ತೊಂದು ಕಡೆ ಯಡಿಯೂರಪ್ಪ ಗ್ಯಾಂಗ್ ಜೊತೆಗಿಟ್ಟುಕೊಂಡು ಚುನಾವಣೆಗೆ ಬಂದಿದೆ. ಇಂತಹವರು ಕಾಂಗ್ರೆಸ್ ಸರ್ಕಾರದ ಬಗ್ಗೆ ಆರೋಪ ಮಾಡುತ್ತಿರುವುದು ಹಾಸ್ಯಸ್ಪದ ಎಂದು ಹೇಳಿದ್ದಾರೆ.
ಕರ್ನಾಟಕ ಬಿಜೆಪಿಯ ಟಾಪ್ 10 ನಾಯಕರು ಭ್ರಷ್ಟಾಚಾರ, ವಂಚನೆ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಮೇಲೆ ಪ್ರಕರಣಗಳಿವೆ. ಇಂತಹವರಿಗೆ ಟಿಕಿಟೆ ನೀಡಿರುವ ಬಿಜೆಪಿ ಹಾಗೂ ಪ್ರಧಾನಿ ಮೋದಿ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವ ನೈತಿಕ ಹಕ್ಕು ಹೊಂದಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ವಿರುದ್ಧ 24 ಭ್ರಷ್ಟಾಚಾರ, ವಂಚನೆ ಮತ್ತು ಸುಳ್ಳು ಪ್ರಕರಣಗಳಿವೆ. ಸುಪ್ರೀಂಕೋರ್ಟ್ ನಲ್ಲಿಯೇ 15 ಭ್ರಷ್ಟಾಚಾರ ಪ್ರಕರಗಳು ಇನ್ನೂ ಇತ್ಯರ್ಥವಾಗಬೇಕಿದೆ. ಅಲ್ಲದೆ, ಯಡಿಯೂರಪ್ಪ ಅವರನ್ನೂ ಒಳಗೊಂಡಂತೆ ಬಿಜೆಪಿಯ ಟಾಪ್ 10 ನಾಯಕರ ವಿರುದ್ಧ ಅನೇಕ ಭ್ರಷ್ಟಾಚಾರ, ವಂಚನೆ ಮತ್ತು ಕ್ರಿಮಿನಲ್ ಪ್ರಕರಣಗಳಿವೆ ಎಂದ ಸುರ್ಜೇವಾಲಾ ಅವರು ಈ ಸಂಬಂಧ ಪ್ರಕರಣಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಪ್ರಧಾನಿ ಮೋದಿಯವರಿಗೆ ಇವೆಲ್ಲವೂ ಗೊತ್ತಿದೆ. ಹಾಗಿದ್ದೂ ಯಡಿಯೂರಪ್ಪ ಅವರನ್ನು ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದೇಕೆ? ಕ್ರಿಮಿನಲ್ ಪ್ರಕರಗಳಿರುವ ನಾಯಕರಿಗೆ ಟಿಕೆಟ್ ನೀಡಿರುವುದೇಕೆ ಎಂದು ಮೋದಿ ಅವರು ರಾಜ್ಯ ಪ್ರಚಾರದ ವೇಳೆ ರಾಜ್ಯ ಜನರಿಗೆ ಸಮಜಾಯಿಷಿ ನೀಡಬೇಕು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos