ಶಿವಮೊಗ್ಗ: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷರಿಗೆ ರಾಜಕೀಯ ನಿವೃತ್ತಿ ನೀಡಬೇಕೆಂದು ಶುಕ್ರವಾರ ಹೇಳಿದ್ದಾರೆ.
ಶಿಕಾರಿಪುರದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲ್ತೇಶ್ ಅವರ ಪರ ಮತಯಾಚನೆ ಮಾಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದರು.
ಗೋಣಿ ಮಾಲ್ತೇಶ್ ಅವರು ಶಿಕಾರಿಪುರದ ಮಗ. ಯಡಿಯೂರಪ್ಪ ಬುಕನಕೆರೆಯವರು. ನಿಮ್ಮ ಕ್ಷೇತ್ರದ ಮಗ ಮಾಲ್ತೇಶ್ ಅವರಿಗೆ ಹಾಕಿ, ಗೆಲವು ಸಾಧಿಸುವಂತೆ ಮಾಡಿ. ಇತಿಹಾಸದಲ್ಲಿಯೇ ಮುಖ್ಯಮಂತ್ರಿಯಾಗಿ ಜೈಲಿಗೆ ಹೋದ ವ್ಯಕ್ತಿಯೆಂದರೆ ಅದು ಬಿ.ಎಸ್.ಯಡಿಯೂರಪ್ಪ. ಜೈಲಿಗೆ ಹೋದವರನ್ನು ಬಿಜೆಪಿ ನಿಜವಾಗಲೂ ಮುಖ್ಯಮಂತ್ರಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಮಾಡಲು ಹೊರಟಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಕರ್ನಾಟಕದಲ್ಲಿ ತಮ್ಮ ಸರ್ಕಾರದ ಮಾಡಿರುವ ಅಭಿವೃದ್ಧಿ ಯೋಜನೆಗಳನ್ನು ಸಿದ್ದರಾಮಯ್ಯ ಅವರು ವಿವರಿಸಿದ್ದಾರೆ. ಶಿಕಾರಿಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ರೈತರ ಕಲ್ಯಾಣಕ್ಕಾಗಿ ರೂ1,800 ಕೋಟಿ ಬಿಡುಗಡೆ ಮಾಡಿದ್ದೆ. ಯಡಿಯೂರಪ್ಪ ರೈತ ವಿರೋಧಿ. ನೀಡಿದ್ದ ಯಾವೊಂದೂ ಭರವಸೆಯನ್ನೂ ಇಡೇರಿಸಿಲ್ಲ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದ್ದ ಹಣವನ್ನು ಯಡಿಯೂರಪ್ಪ ಅವರು, ಬಿಜೆಪಿ ಅಧಿಕಾರಾವಧಿಯಲ್ಲಿ, ಸಾಗರದಲ್ಲಿರುವ ತಾವು ನಿರ್ಮಿಸುತ್ತಿದ್ದ ಕಾಲೇಜು ನವೀಕರಣಕ್ಕೆ ಬಳಸಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.
ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಚೆಕ್ ಗಳ ಮುಖಾಂತರ ಲಂಚಗಳನ್ನು ಸ್ವೀಕರಿಸುತ್ತಿದ್ದರು. ಬಿಜೆಪಿ ನಾಯಕರಾದ ಜನಾರ್ಧನ ರೆಡ್ಡಿ, ಕರುಣಾಕರ ರೆಡ್ಡಿ, ಕೃಷ್ಣಯ್ಯ ಶೆಟ್ಟಿ ಹಾಗೂ ಯಡಿಯೂರಪ್ಪ ಅವರು ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದಾರೆ.
ಬಿಜೆಪಿ ಪ್ರತಿನಿಧಿಗಳು ಹಾಗೂ ಯಡಿಯೂರಪ್ಪ ಅವರು ಯಾವಾಗಲೂ ಗೆಲವಿನ ಚಿನ್ಹೆಗಳನ್ನು ತೋರಿಸುತ್ತಿರುತ್ತಾರೆ. ಜೈಲಿನೊಳಗೆ ಹೋಗುವಾಗಲೂ ಹಾಗೂ ಹೊರಗೆ ಬರುವಾಗಲೂ ಗೆಲುವಿನ ಚಿನ್ಹೆಯನ್ನು ತೋರಿಸುತ್ತಾರೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುವುದರಿಂದ ಬಿಜೆಪಿ ಗೆಲವು ಸಾಧಿಸಲು ಸಾಧ್ಯವಿಲ್ಲ. ಅವರ ಪಕ್ಷ ಎಂದಿಗೂ ಗೆಲವು ಸಾಧಿಸುವುದಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos