ಮಳವಳ್ಳಿ: ವಿಧಾನಸಭೆ ಚುನಾವಣೆ ಕಾವೇರುತ್ತಿದ್ದಂತೆ ಸಿದ್ದರಾಮಯ್ಯ ಸಹ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲ ಪ್ರಚಾರದ ವೇಳೆ ನರೇಂದ್ರ ಮೋದಿ ಅವರಿಗೆ ಮತ ನಿಡಿ, ಅವರು ಒಳ್ಳೆ ಕೆಲಸ ಮಾಡಿದ್ದಾರೆ ಮೋದಿಗೆ ಮತ ನಿಡುವಂತೆ ಕೇಳಿದ್ದಾರೆ!
ಮಂಡ್ಯ ಜಿಲ್ಲೆ ಮಳವಳ್ಳಿಯ ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಸ್ವಾಮಿ ಪರ ಪ್ರಚಾರ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನರೇಂದ್ರ ಸ್ವಾಮಿ ಎನ್ನುವ ಬದಲು ನರೇಂದ್ರ ಮೋದಿಗೆ ಮತ ನಿಡಿ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.
ಭಾಷಣದುದ್ದಕ್ಕೂ ನಾಲ್ಕು ಬಾರಿ ನರೇಂದ್ರಸ್ವಾಮಿ ಎನ್ನುವ ಬದಲು ನರೇಂದ್ರ ಮೋದಿ ಎಂದ ಸಿದ್ದರಾಮಯ್ಯ ಎಲ್ಲ ಹಳ್ಳಿಗಳಲ್ಲಿ ಕುಡಿಯುವ ನೀರು, ವಿದ್ಯುತ್ ಹಾಗೂ ಅತ್ಯುತ್ತಮ ರಸ್ತೆಗಳು ಆಗಿವೆ ಎಂದರೆ ಅದಕ್ಕೆ ಕಾರಣ ನರೇಂದ್ರ ಮೋದಿ. ಹಾಗೂ ರಾಜ್ಯ ಸರ್ಕಾರದ ಸಹಕಾರ ಕಾರಣ ಎಂದಿದ್ದಾರೆ.
ತಕ್ಷಣ ಅಲ್ಲೇ ಪಕ್ಕದಲ್ಲಿದ್ದ ನರೇಂದ್ರ ಸ್ವಾಮಿ ಸಿದ್ದರಾಮಯ್ಯನವರ ತಪ್ಪನ್ನು ತೋರಿಸಿದ್ದಾರೆ. ಆಗ ನರೇಂದ್ರ ಮೋದಿ ಮಿತ್ಯ, ನರೇಂದ್ರ ಸ್ವಾಮಿ ಸತ್ಯ! ಎಂದ ಸಿಎಂ ಮತ್ತೆ ಭಾಷಣ ಮುಂದುವರಿಸಿ ನರೇಂದ್ರ ಮೋದಿಗೆ ಮತ ನೀಡಿದರೆ ನನಗೆ ನೀಡಿದಂತೆ ಎಂದು ಗೊಂದಲ ಮಾಡಿಕೊಂಡರು.
ಮತ್ತೆ ಕಡೆಗೊಮ್ಮೆ 'ಮಳವಳ್ಳಿಗೆ ನರೇಂದ್ರ ಸ್ವಾಮಿ, ಮೋದಿ ಆ ಕಡೆ ಗುಜರಾತಿಗೆ’ ಎಂದು ತಪ್ಪನ್ನು ತಿದ್ದಿಕೊಂಡಿದ್ದಾರೆ. ಹೀಗೆ ಭಾಷಣದುದ್ದಕ್ಕೂ ನರೇಂದ್ರ ಸ್ವಾಮಿ ಹಾಗೂ ನರೇಂದ್ರ ಮೋದಿ ನಡುವೆ ಗೊಂದಲಕ್ಕೀಡಾಗಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಮೋದಿಯ ಭಯ ಆರಂಭವಾಗಿದೆ. ಹಾಗಾಗಿ ಅವರ ಮನಸ್ಸಿನಲ್ಲಿ ತುಂಬಿರುವ ಮೋದಿಯೇ ಅವರ ಮಾತಿನಲ್ಲಿ ಗೊತ್ತಿಲ್ಲದಂತೆ ಆಚೆ ಬರುತ್ತಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ಸಂದೇಶ ಹರಿದಾಡುತ್ತಿದೆ. ಸಿದ್ದರಾಮಯ್ಯ ಬಾಷಣದ ವೀಡಿಯೋ ಇಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos