ರಾಜಕೀಯ

ಮತದಾರರನ್ನು ಸೆಳೆಯಲು ರಾಹುಲ್ ಗಾಂಧಿ ಸೈಕಲ್ ಸವಾರಿ, ಇಂಧನ ಬೆಲೆ ಏರಿಕೆ ಖಂಡನೆ

Sumana Upadhyaya

ಕೋಲಾರ: ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ನಿನ್ನೆ ರೋಡ್ ಶೋ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತದಾರರಿಗೆ ಹತ್ತಿರವಾಗಲು ಗಲ್ಲಿಗಲ್ಲಿಗಳಲ್ಲಿ ಸೈಕಲ್ ನಲ್ಲಿ ಸಂಚರಿಸಿದರು, ಅಲ್ಲದೆ ಸಿಲಿಂಡರ್ ಬೆಲೆ ಬಗ್ಗೆ ಮತದಾರರ ಗಮನ ಸೆಳೆಯಲು ಕಾರ್ಡ್ ಬೋರ್ಡ್ ನಿಂದ ತಯಾರಿಸಿದ ಸಿಲಿಂಡರ್ ನ್ನು ಎತ್ತಿ ತೋರಿಸಿದರು.

ಮಾಲೂರು, ಹೊಸಕೋಟೆ, ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರಗಳಲ್ಲಿ ರಾಹುಲ್ ಗಾಂಧಿ ರೋಡ್ ಶೋ ನಡೆಸಿದರು. ಮಾಲೂರಿನಲ್ಲಿ ಅವರು ಹೆಲಿಕಾಪ್ಟರ್ ನಿಂದ ಇಳಿಯುತ್ತಿದ್ದಂತೆ ನೆರೆದಿದ್ದ ಅಪಾರ ಸಂಖ್ಯೆಯ ಜನಸ್ತೋಮ ಭವ್ಯವಾಗಿ ಅವರನ್ನು ಸ್ವಾಗತಿಸಿತು. ರಸ್ತೆಯ ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಇನ್ನು ಕೆಲವರು ಚೆನ್ನಾಗಿ ಕಾಣಬೇಕೆಂದು ಮರಕ್ಕೆ ಹತ್ತಿ ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಾಹನದಿಂದ ತಕ್ಷಣವೇ ಇಳಿದ ರಾಹುಲ್ ಗಾಂಧಿ ಕಾಲ್ನಡಿಗೆಯಲ್ಲಿ ಸಾಗಿದಾಗ ಅವರ ಬೆಂಬಲಿಗರಿಗೆ ಅಚ್ಚರಿಯಾಯಿತು. ನಂತರ ಒಂದು ಸೈಕಲ್ ಬಂತು, ಅದರಲ್ಲಿ ರಾಹುಲ್ ಗಾಂಧಿ ಕುಳಿತು ಸಂಚರಿಸಿದಾಗಂತೂ ಬೆಂಬಲಿಗರಿಗೆ ಇನ್ನಷ್ಟು ಆಶ್ಚರ್ಯವಾಯಿತು. ಕೇಂದ್ರ ಸರ್ಕಾರದ ಇಂಧನ ಬೆಲೆ ಏರಿಕೆ ವಿರೋಧಿಸಿ ಅವರು ಪ್ರತಿಭಟನೆ ನಡೆಸಲು ಮುಂದಾದರು. ಕೆಲ ಮಹಿಳೆಯರು ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಕಾರ್ಡ್ ಬೋರ್ಡ ನಿಂದ ತಯಾರಿಸಿದ ಸಿಲೆಂಡರ್ ನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದರು. ರಾಹುಲ್ ಗಾಂಧಿ ಕೂಡ ಅವುಗಳಲ್ಲಿ ಒಂದನ್ನು ಹಿಡಿದುಕೊಂಡು ಮುಂದೆ ಸಾಗಿದರು.

ಸ್ವಲ್ಪ ದೂರ ಸಾಗಿ ಮತ್ತೆ ವಾಹನವನ್ನೇರಿ ನೆರೆದಿದ್ದ ಜನಸ್ತೋಮದ ಜೊತೆ ಮಾತನಾಡಲು ಮೈಕ್ ಹಿಡಿದುಕೊಂಡರು. ಆದರೆ ಮತ್ತೆ ತಮ್ಮ ಮನಸ್ಸು ಬದಲಿಸಿ ವಾಹನದಿಂದ ಇಳಿದು ಕಿರಿದಾದ ಹಾದಿ ಮೂಲಕ ಮುಂದೆ ಸಾಗಿದರು. ನಂತರ ಎತ್ತಿನ ಗಾಡಿಯನ್ನೇರಿ ಕುಳಿತು ಅಲ್ಲಿ ಮಾತನಾಡಿದರು.

ಬಿಜೆಪಿ ಮತ್ತು ಬಿ.ಎಸ್,ಯಡಿಯೂರಪ್ಪ ವಿರುದ್ಧ ವಾಗ್ಧಾಳಿ ನಡೆಸಿದ ರಾಹುಲ್ ಗಾಂಧಿ, ಇಂಧನ ಬೆಲೆ ಏರಿಕೆ ವಿರುದ್ಧ ಕೇಂದ್ರ ಸರ್ಕಾರವನ್ನು ಆರೋಪಿಸಿದರು. ರೆಡ್ಡಿ ಸೋದರರು ಮತ್ತು ಅವರ ಸಹಚರರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಭ್ರಷ್ಟಾಚಾರ ಮತ್ತು ಕಳಂಕಿತ ಅಭ್ಯರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಅವರು ಜೆಡಿಎಸ್ ಯಾವುದಕ್ಕೆ ಸಹಾಯ ಮಾಡುತ್ತದೆ ಕಾಂಗ್ರೆಸ್ ಗೋ ಅಥವಾ ಬಿಜೆಪಿಗೊ, ಅದು ಜಾತ್ಯತೀತ ಜನತಾದಳವೇ ಅಥವಾ ಸಂಘ ಪರಿವಾರ ಜನತಾದಳವೇ ಎಂದು ನಿರ್ಧಾರ ಮಾಡಬೇಕು ಎಂದರು.

SCROLL FOR NEXT