ಬೆಂಗಳೂರು: ನಾನು ಇನ್ನೂ ಹೆಚ್ಚು ದಿನ ಬದುಕುವುದಿಲ್ಲ. ಬದುಕಬೇಕಿದ್ದರೆ ನೀವು ಜೆಡಿಎಸ್ ಗೆ ಮತ ಹಾಕಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಭಾವಾನಾತ್ಮಕವಾಗಿ ಮತದಾರರ ಮನ ಗೆಲ್ಲಲು ಯತ್ನಿಸಿದ್ದಾರೆ.
ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿಳುವ ಕೆಲವೇ ಗಂಟೆಗಳ ಮುನ್ನ ರಾಜರಾಜೇಶ್ವರಿ ವಿಧಾಸಭಾ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆಯಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಕುಮಾರಸ್ವಾಮಿ, 'ಕುಮಾರಣ್ಣ ಇನ್ನು ಹೆಚ್ಚು ದಿನ ಬದುಕುವುದಿಲ್ಲ. ಇನ್ನೊಂದು 20 ವರ್ಷ ಬದುಕಬೇಕಾದರೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ, ಆ ಮೂಲಕ ನನ್ನನ್ನು ಬದುಕಿಸಿ' ಎಂದರು.
ತೀವ್ರ ಜ್ವರದ ನಡುವೆಯೂ ಬಿರುಸಿನ ಪ್ರಚಾರ ನಡೆಸಿದ ಕುಮಾರಸ್ವಾಮಿ, ಅನಾರೋಗ್ಯ ಇದ್ದರೂ ನಾನು ಜನಪರ ಸರ್ಕಾರ ಬರಬೇಕೆಂದು ಹೋರಾಟ ಮಾಡುತ್ತಿದ್ದೇನೆ. 113 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಪಕ್ಷದ ಅಭ್ಯರ್ಥಿಗಳು ದುಡ್ಡು ದುಡ್ಡು ಎಂದು ಹಿಂದೆ ಬಿದ್ದಿದ್ದಾರೆ, ನಾನೆಲ್ಲಿ ಹೋಗಿ ಸಾಯಲಿ. ಚಂದಾ ಎತ್ತಿ ಅಭ್ಯರ್ಥಿಗಳಿಗೆ ಹಣ ನೀಡುತ್ತಿದ್ದೇನೆ ಎಂದರು.
ಕುಮಾರಸ್ವಾಮಿ ಅವರು ಇಂದು ಮಾಧ್ಯಮ ಸಂವಾದ ನಡೆಸಬೇಕಿತ್ತು. ಆದರೆ, ಅನಾರೋಗ್ಯದ ಹಿನ್ನಲೆಯಲ್ಲಿ ಕಾರ್ಯಕ್ರಮ ರದ್ದು ಪಡಿಸಲಾಗಿದೆ. ಬುಧವಾರ, ಶಾಂತಿನಗರ ವಿಧಾನಸಭಾಕ್ಷೇತ್ರದಲ್ಲಿ ಪಟಾಕಿ ಹೊಗೆಯಿಂದ ಕುಮಾರಸ್ವಾಮಿಯವರಿಗೆ ಅಲರ್ಜಿಯಾಗಿದ್ದು, ಅತಿಯಾದ ಓಡಾಟದಿಂದ ಸುಸ್ತಾದ ಪರಿಣಾಮ ಈಗ ಜ್ವರದಿಂದ ಬಳಲುತ್ತಿದ್ದಾರೆಂದು ಜೆಡಿಎಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos