ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು
ಬಳ್ಳಾರಿ: ತೃತೀಯ ರಂಗ ಮಳೆಗಾಲದಲ್ಲಿ ಬೆಳೆಯುವ ಅಣಬೆ ಇದ್ದಂತೆ. ಬಹಳಷ್ಟು ದಿನ ಉಳಿಯುವುದಿಲ್ಲ ತೃತೀಯ ರಂಗಕ್ಕೆ ಭವಿಷ್ಯವಿಲ್ಲ ಎಂದು ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಅವರು ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತೃತೀಯ ರಂಗ ಮಳೆಗಾಲದಲ್ಲಿ ಬೆಳೆಯುವ ಅಣಬೆಯಿದ್ದಂತೆ. ಬಹಳಷ್ಟು ದಿನ ಉಳಿಯುವುದಿಲ್ಲ. ತೃತೀಯ ರಂಗಕ್ಕೆ ಭವಿಷ್ಯವೂ ಇಲ್ಲ. ತೃತೀಯ ರಂಗದಲ್ಲಿನ ಎಲ್ಲಾ ಪಕ್ಷಗಳು ಪ್ರಧಾನಿ ಮೋದಿಯವರ ವಿರುದ್ಧ ಸೋತು ಸುಣ್ಣವಾದ ಪಕ್ಷಗಳೇ ಆಗಿವೆ ಎಂದು ಹೇಳಿದ್ದಾರೆ.
ಅತಿಯಾದ ಆತ್ಮವಿಶ್ವಾಸ, ಪಕ್ಷದ ನಾಯಕರು ಮಾಡಿದ್ದ ತಪ್ಪುಗಳಿಂದಾಗಿ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತು. ಬಳ್ಳಾರಿಯಲ್ಲಿ ಬಿಜೆಪಿ ಗೆಲವು ಸಾಧಿಸಿದ್ದೇ ಆಗಿದ್ದರೆ, ಸರ್ಕಾರ ರಚನೆ ಮಾಡಲು ಸುಲಭವಾಗುತ್ತಿತ್ತು. ಸುರೇಶ್ ಬಾಬು ಸೇರಿದಂತೆ ಹಲವು ನಾಯಕರು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿದ್ದರು. ಅಲ್ಲದೆ, ಟಿಕೆಟ್ ನೀಡುವಲ್ಲಿಯೂ ತಪ್ಪುಗಳಾಗಿತ್ತು. ಸರಿಯಾದ ಅಭ್ಯರ್ಥಿಗಳನ್ನು ಗುರ್ತಿಸಿ ಟಿಕೆಟ್ ನೀಡುವಲ್ಲಿ ಪಕ್ಷ ವಿಫಲಗೊಂಡಿತ್ತು. ಅತ್ಯಂತ ಕಡಿಮೆ ಅಂತರಹಿಂದ ಸುರೇಶ್ ಬಾಬು ಅವರು ಸೋಲು ಕಂಡಿದ್ದಾರೆ. ಒಂದು ವೇಳೆ ಅವರು ಗೆದ್ದಿದ್ದೇ ಆಗಿದ್ದರೆ, ಪಕ್ಷಕ್ಕೆ ಸಹಾಯವಾಗುತ್ತಿದ್ದು, ಹಗರೀಬೊಮ್ಮನಹಳ್ಳಿ ಹಾಗೂ ಹಡಗಲಿಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಪಕ್ಷ ಟಿಕೆಟ್ ನೀಡಬೇಕಿತ್ತು ಎಂದು ತಿಳಿಸಿದ್ದಾರೆ.
ಇದೇ ವೇಳೆ ಕುಮಾರಸ್ವಾಮಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾದ ರೈತರ ಸಾಲ ಮನ್ನಾ ಮಾಡುವ ಭರವಸೆಯನ್ನು ಕುಮಾರಸ್ವಾಮಿಯವರು ಈಡೇರಿಸಬೇಕು. ಒಂದು ವೇಳೆ ಆಗದೇ ಹೋದರೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದಿದ್ದಾರೆ.
ಕುಮಾರಸ್ವಾಮಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದ ಎಲ್ಲಾ ತೃತೀಯ ರಂಗದ ನಾಯಕರಿಗೆ ಪ್ರಾದೇಶಿಕ ಹಿತಾಸಕ್ತಿಯೇ ಮುಖ್ಯ ಹೊರತು, ರಾಷ್ಟ್ರೀಯ ಹಿತಾಸಕ್ತಿಗಳಲ್ಲ. ಅವರೆಲ್ಲರೂ ಒಂದುಗೂಡಲೇ ಸಾಧ್ಯವೇ ಇಲ್ಲ. ತೃತೀಯ ರಂಗ ಒಂದಾಗುವುದು ಎಂದರೆ ತಕ್ಕಡಿಯಲ್ಲಿಟ್ಟು ಕಪ್ಪೆಗಳನ್ನು ತೂಗಿದಂತೆ ಎಂದು ವ್ಯಂಗ್ಯವಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos