ತುಮಕೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಯಾರಿಗೂ ನೆಮ್ಮದಿಯಿಂದ ಇರಲೂ ಬಿಡಲ್ಲ. ದೇವೇಗೌಡರು ಅವರದೇ ಸ್ಟೈಲಿನಲ್ಲಿ ರಾಜಕೀಯ ಮಾಡುತ್ತಾರೆ ಎಂದು ಶಾಸಕ ವಿ.ಸೋಮಣ್ಣ ಲೇವಡಿ ಮಾಡಿದ್ದಾರೆ.
ಸಿದ್ದಗಂಗಾಮಠಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು, ಹಿರಿಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದು ನಂತರ ಮಾತನಾಡಿದರು, ನಾನು ಕೂಡ ದೇವೇಗೌಡರ ಗರಡಿಯಲ್ಲೇ ಪಳಗಿದವನು. ಅವರು ಕುಮಾರಸ್ವಾಮಿಯನ್ನೂ ಬಿಡುವುದಿಲ್ಲ. ಅವರದ್ದೆ ಆದ ಒಂದು ಸ್ಟೈಲ್ ಇದೆ. ಅದು ಯಾವ ಮಟ್ಟಕ್ಕೆ ನಿಲ್ಲುತ್ತದೆ ಎಂಬುದು ಗೊತ್ತಾಗುವುದಿಲ್ಲ ಎಂದು ಟೀಕಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆಂಬ ಉದ್ದೇಶದಿಂದ ಷಡ್ಯಂತ್ರ ಮಾಡಿ ಒಂದು ರಾಷ್ಟ್ರೀಯ ಪಕ್ಷ ಪ್ರಾದೇಶಿಕ ಪಕ್ಷದ ಜತೆ ಕೈಜೋಡಿಸಿದೆ. ಅಲ್ಲದೆ, ದೇವೇಗೌಡರು ಇದರಲ್ಲಿ ಸಫಲರಾಗಿದ್ದಾರೆ. ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ದೇವೇಗೌಡರು ಯಾರೊಬ್ಬರನ್ನು ನೆಮ್ಮದಿಯಾಗಿರಲು ಬಿಟ್ಟಿರುವುದನ್ನು ನಾನು ಕಂಡೇ ಇಲ್ಲ' ಎಂದು ದೂರಿದರು.