ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ನಮ್ಮ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದು, ನಮ್ಮ 11 ಮಂದಿಯ ವಿರುದ್ಧ ಯಾವುದೇ ಕ್ಷಣದಲ್ಲಿ ಸಿಬಿಐನಿಂದ ಸರ್ಚ್ ವಾರಂಟ್ ಹೊರಡಿಸಬಹುದು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಕಾಂಗ್ರೆಸ್ ನಾಯಕರಾದ ಡಿ.ಕೆ .ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ತುರ್ತು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.
ಸದಾಶಿವ ನಗರದ ನಿವಾಸದಲ್ಲಿ ಗುರುವಾರ ಬೆಳಗ್ಗೆ ಜಂಟಿ ಸುದ್ದಿಗೋಷ್ಟಿ ನಡೆಸಿದ ಡಿ.ಕೆ.ಸಹೋದರರು. 'ಮೋದಿ ಮತ್ತು ಅಮಿತ್ ಶಾ ಸೇಡಿನ ರಾಜಕಾರಣ ಮಾಡುತ್ತಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ನಮ್ಮ 11 ಜನರ ಮೇಲೆ ಸಿಬಿಐ,ಇಡಿ ಮತ್ತು ಐಟಿ ಮೂಲಕ ಕೇಸ್ ದಾಖಲಿಸಿ ಸರ್ಚ್ ವಾರೆಂಟ್ ಜಾರಿ ಮಾಡಲು ಸಿದ್ದತೆ ನಡೆಸಿದ್ದಾರೆ' ಎಂದರು.
ಬುಧವಾರ ಸಿಬಿಐ ಕೋರ್ಟ್ನಿಂದ ಸರ್ಚ್ ವಾರಂಟ್ ಪಡೆದಿರುವ ಮಾಹಿತಿ ಲಭ್ಯವಾಗಿದೆ.ಮೂರು ನಾಲ್ಕು ತಿಂಗಳುಗಳಿಂದ ಅನೇಕ ಮಾಹಿತಿಗಳು ಬಂದಿವೆ. ಎಲ್ಲೆಲ್ಲಿ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂಬುದು ತಿಳಿದಿದೆ.
ನಮ್ಮ ಕುಟುಂಬವನ್ನು ಬೆದರಿಸಿ ಬಗ್ಗಿಸಬಹುದು ಎಂದುಕೊಂಡರೆ ನಾವು ಜಗ್ಗುವವರಲ್ಲ. ನಾವು ಎಲ್ಲದಕ್ಕೂ ಸಿದ್ದರಿದ್ದೇವೆ. ನಾವು ಎಂದು ತಪ್ಪು ಮಾಡಿದವರಲ್ಲ, ಕಾನೂನು ಮೀರಿ ರಾಜಕಾರಣ ಮಾಡಿದವರಲ್ಲ, ಅಕ್ರಮಗಳನ್ನು ಮಾಡಿಲ್ಲ. ಸುಳ್ಳು ಕೇಸ್ ದಾಖಲಿಸಿ ನಮ್ಮ ಧ್ವನಿ ಅಡಗಿಸಬಹುದು ಎಂದರೆ ಅದು ನಿಮ್ಮ ಭ್ರಮೆ' ಎಂದು ಹೇಳಿದ್ದಾರೆ.
ಹುಟ್ಟುಸಾವಿನ ನಡುವೆ ಏನು ಬೇಕಾದರೂ ಆಗಬಹುದು. ನಮ್ಮ ವಿರುದ್ಧ ಸುಳ್ಳು ಪ್ರಕರಣಗಳು ದಾಖಲಾಗಬಹುದು. ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ. ಅಧಿಕಾರ ಸೇರಿದಂತೆ ಯಾವುದೂ ಶಾಶ್ವತ ಅಲ್ಲ. ಸೇಡಿನ ರಾಜಕಾರಣ ಸರಿಯಲ್ಲ. ನ್ಯಾಯಾಂಗಕ್ಕೆ ಗೌರವ ನೀಡುತ್ತೇವೆ ಎಂದು ತಿಳಿಸಿದ್ದಾರೆ.