ಬೆಂಗಳೂರು: ಕೃಷಿ ಸಾಲ ಮನ್ನಾ ಮಾಡುವ ಯೋಜನೆ ನಾಶಪಡಿಸಲು ಬಿಜೆಪಿ ಯತ್ನಿಸುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕ್ ಗಳು ಸಹಕಾರ ನೀಡದಂತೆ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡುವ ಸಂಬಂಧ ನವೆಂಬರ್ ಒಂದರಿಂದ ಬ್ಯಾಂಕುಗಳಿಗೆ ಹಣವನ್ನು ಪಾವತಿ ಮಾಡಲು ಸರ್ಕಾರ ಸಿದ್ಧವಾಗಿದ್ದರೂ ಬ್ಯಾಂಕುಗಳು ವಿವರ ನೀಡದೇ ಇರುವುದನ್ನು ನೋಡಿದರೆ ಇದಕ್ಕೆ ರಾಜಕಾರಣ ಎನ್ನದೆ ಇನ್ನೇನೆಂದು ಹೇಳಬೇಕೆಂದು ತೀಕ್ಷ್ಣವಾಗಿ ಹೇಳಿದ್ದಾರೆ.
ಸಾಲ ಮನ್ನಾ ಮಾಡಲು ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಸಾಲ ಮನ್ನಾ ಮಾಡಲು ರೂ.6,500 ಕೋಟಿ ಈಗಾಗಲೇ ತೆಗೆದಿರಿಸಲಾಗಿದೆ. ಆದರೆ, ಯಾವ ರೈತ ಎಷ್ಠು ಸಾಲ ಪಡೆದಿದ್ದಾರೆಂಬ ಬಗ್ಗೆ ಬ್ಯಾಂಕುಗಳು ಮಾಹಿತಿ ನೀಡಬೇಕಾಗುತ್ತದೆ. ನಾವು ರೈತರ ಸಾಲ ಮನ್ನಾ ಮಾಡಲು ಹಣ ರೆಡಿ ಮಾಡಿಟ್ಟುಕೊಂಡಿದ್ದರೂ ಬ್ಯಾಂಕುಗಳು ವಿವರ ನೀಡುತ್ತಿಲ್ಲ ಎಂದರೆ ಏನರ್ಥ, ರಾಜಕರಣ ಎಂದು ಹೇಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕುಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತದೆ. ಬಿಜೆಪಿ ನಾಯಕರು ರಾಜ್ಯದ ರೈತರ ಸಾಲ ಮನ್ನಾ ಮಾಡಲು ಕೇಂದ್ರದಿಂದ ಬಿಡಿಗಾಸು ತರಲಿಲ್ಲ. ಕೊಲೆ ಪಕ್ಷ ಪ್ರಧಾನಿ ಮೋದಿ ಅಥವಾ ಹಣಕಾಸು ಸಚಿವ ಜೇಟ್ಲಿ ಅವರ ಬಳಿ ಹೋಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರಾಜ್ಯದ ರೈತರು ಮಾಡಿರುವ ಸಾಲದ ವಿವರವನ್ನು ಸರ್ಕಾರಕ್ಕೆ ಕೊಡುವಂತೆ ಸಂಬಂಧ ಪಟ್ಟ ಬ್ಯಾಂಕುಗಳಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸುವ ಕೆಲ ಮಾಡಿದರೆ, ಅವರಿಗೆ ಆಭಾರಿಯಾಗಿರುತ್ತೇನೆಂದು ತಿಳಿಸಿದ್ದಾರೆ.