ಬೆಳಗಾವಿ: ಕಾಂಗ್ರೆಸ್'ನ ಬೆಳಗಾವಿ ಬಂಡಾಯ ಬಹುತೇಕ ಶಮನವಾಗುವ ಹಂತ ತಲುಪಿದ್ದಾಯ್ದು. ಇದೀಗ ಬಳ್ಳಾರಿ ಕಾಂಗ್ರೆಸ್ ನಾಯಕರ ಸರದಿ ಮುಂದಾಗಿದ್ದು, ಬೆಳಗಾವಿ ಜಿಲ್ಲೆಯ ವ್ಯವಹಾರದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೂಗು ತೂರಿಸುವುದರ ವಿರುದ್ಧ ಜಾರಕಿಹೊಳಿ ಸಹೋದರರು ಸಿಡಿದ್ದೆ ನಂತರ ಇದೀಗ ಬಳ್ಳಾರಿ ಜಿಲ್ಲೆಗೆ ಬಳ್ಳಾರಿಯವರೇ ಆದ ಉಸ್ತುವಾರಿ ಸಚಿವರ ನೇಮಕಕ್ಕೆ ಅಲ್ಲಿನ ಕಾಂಗ್ರೆಸ್ ನಾಯಕರ ಪ್ರಯತ್ನ ಆರಂಭವಾಗಿದೆ.
ಒಂದೆಡೆ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ, ವಾಲ್ಮೀಕಿ ಸಮುದಾಯದ ಮುಖಂಡ, ಬಿಜೆಪಿಯಿಂದ ವಲಸೆ ಬಂದ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕೊಡಿಸಿ ಬಳ್ಳಾರಿ ಉಸ್ತುವಾರಿಯಾಗಿ ಪ್ರತಿಷ್ಠಾಪಿಸಲು ಜಾರಕಿಹೊಳಿ ಸಹೋದರರು ಪ್ರಯತ್ನ ನಡೆಸಿದ್ದರೆ, ಮತ್ತೊಂದೆಡೆ ಬಳ್ಳಾರಿಯ ಇತರೆ ಕಾಂಗ್ರೆಸ್ ಶಾಸಕರು ತಮ್ಮ ಜಿಲ್ಲೆಯ ಮೂಲ ಕಾಂಗ್ರೆಸ್ಸಿಗರಿಗೇ ಸಚಿವ ಸ್ಥಾನ ನೀಡಬೇಕೆಂದು ದೆಹಲಿ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡದಂತೆ ನಿನ್ನೆಯಷ್ಟೇ ಬಳ್ಳಾರಿ ಶಾಸಕರು ರಾಜಧಾನಿ ದೆಹಲಿಗೆ ತೆರಳಿದ್ದರು. ಈ ವೇಳೆ ಹೈಕಮಾಂಡ್ ಬಳಿ ಜಾರಕಿಹೊಳಿ ಸಹೋದರರ ಆಗ್ರಹಗಳಿಗೆ ಮಣಿಯದಂತೆ ಮನವಿ ಮಾಡಿಕೊಂಡಿದ್ದಾರೆ.
ಕೇಂದ್ರ ನಾಯಕರನ್ನು ಈ ಹಿಂದೆ ಸತೀಶ್ ಜಾರಕಿಹೊಳಿಯವರು ಭೇಟಿ ಮಾಡಲು ದೆಹಲಿಗೆ ಹೋಗುವ ದಿನದಂದೇ ಬಳ್ಳಾರಿ ಶಾಸಕರೂ ಕೂಡ ಕೇಂದ್ರ ನಾಯಕರನ್ನು ಭೇಟಿ ಮಾಡಿದ್ದಾರೆ.
ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಸೇರಿರುವ ನಾಗೇಂದ್ರ ಅವರಿಗೆ ಯಾವ ಕಾರಣಕ್ಕೂ ಮಂತ್ರಿ ಸ್ಥಾನ ನೀಡಬಾರದು. ಹಾಗೆಯೇ ಬಳ್ಳಾರಿ ಕೋಟಾದಲ್ಲಿನ ಮಂತ್ರಿ ಸ್ಥಾನವನ್ನು ಆ ಜಿಲ್ಲೆಯಲ್ಲಿನ ಶಾಸಕರೊಂದಿಗೆ ಚರ್ಚಿಸಿಯೇ ತೀರ್ಮಾನಿಸಬೇಕೇ ಹೊರದು ಅನ್ಯ ಭಾಗದ ನಾಯಕರು ಹೇಳಿದವರನ್ನು ಮಂತ್ರಿ ಮಾಡಬಾರದು ಎಂಬುದು ಈ ಶಾಸಕರ ಒತ್ತಾಯವಾಗಿದೆ.
ಈ ನಡುವೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿ.ಕೆ.ಶಿವಕುಮಾರ್ ಅವರನ್ನು ರಮೇಶ್ ಜಾರಕಿಹೊಳಿಯವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಕುರಿತಂತೆ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿಯವರು, ರಾಹುಲ್ ಗಾಂಧಿಯವರು ನಮ್ಮ ಸಮಸ್ಯೆಗಳನ್ನು ಆಲಿಸಿದ್ದಾರೆ. ಶೀಘ್ರದಲ್ಲಿ ಪರಿಹರಿಸುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos