ಬೆಂಗಳೂರು: ದಂಗೆ ಅಂದರೆ ಜನರು ಪ್ರತಿಭಟಿಸುತ್ತಾರೆಂದು ಅರ್ಥ. ಇದರಲ್ಲಿ ತಪ್ಪೇನಿದೆ ಎಂದು ಹೆಚ್.ಡಿ.ಕುಮಾರಸ್ವಾಮಿಯವರು ತಮ್ಮ ಹೇಳಿಕೆಗೆ ಗುರುವಾರ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನ ನಡೆಸುತ್ತಿದ್ದು, ಹೀಗಾದರೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಜನರಿಗೆ ಕರೆ ನೀಡಬೇಕಾಗುತ್ತದೆ ಎಂಬ ಕುಮಾರಸ್ವಾಮಿಯವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಗುರುವಾರ ತೀವ್ರ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು.
ಕುಮಾರಸ್ವಾಮಿಯವರು ಹೇಳಿಕೆ ನೀಡುತ್ತಿದ್ದಂತೆಯೇ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಿನ್ನೆ ಯಡಿಯೂರಪ್ಪ ನಿವಾಸದ ಮನೆಯ ಮೇಲೆ ದಾಳಿ ನಡೆಸಿದ್ದರು. ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
ಇದರ ಬೆನ್ನಲ್ಲೇ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿಯವರು, ದಂಗೆ ಅಂದರೆ, ಜನರು ಪ್ರತಿಭಟಿಸುತ್ತಾರೆಂದು ಅರ್ಥ. ಇದರಲ್ಲಿ ತಪ್ಪೇನಿದೆ? ಯಡಿಯೂರಪ್ಪ ಹಿಂದೆ ದೊಣ್ಣೆ, ಬಡಿಗೆ ಹಿಡಿದು ಪ್ರತಿಭಟನೆ ಮಾಡುತ್ತೇವೆಂದು ಹೇಳಿದ್ದರು. ಬಿಜೆಪಿಯವರು ರಾಜ್ಯಪಾಲರಿಗೇ ಅಲ್ಲ, ರಾಷ್ಟ್ರಪತಿಗಳಿಗೂ ದೂರು ನೀಡಲಿ. ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ.