ಬೆಂಗಳೂರು: ಸೈನ್ಯಕ್ಕೆ ಸೇರುವವರು 2 ಹೊತ್ತಿನ ಊಟಕ್ಕೆ ಗತಿ ಇಲ್ಲದವರು.. ಅಂತಹವರನ್ನು ಪ್ರಧಾನಿ ಮೋದಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಕುಮಾರಸ್ವಾಮಿ ಸೈನಿಕರಿಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಹೇಳಿದೆ.
ಈ ಬಗ್ಗೆ ವಿಡಿಯೋವೊಂದನ್ನು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ ಸಿಎಂ ಕುಮಾಸ್ವಾಮಿ ವಿರುದ್ದ ತೀವ್ರ ಟೀಕಾ ಪ್ರಹಾರ ನಡೆಸಿದೆ. ತಮ್ಮ ಮಗನಿಗೆ ಲೋಕಸಭಾ ಚುನಾವಣಾ ಟಿಕೆಟ್ ಕೊಡಿಸುವಲ್ಲಿ ತೋರಿಸಿದ ಉತ್ಸಾಹವನ್ನು, ದೇಶ ಕಾಯಲು ಆತನನ್ನು ಸೈನ್ಯಕ್ಕೆ ಕಳುಹಿಸುವಲ್ಲಿ ಯಾಕೆ ತೋರಿಸಲಿಲ್ಲ' ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದೆ.
'ಸೈನ್ಯಕ್ಕೆ ಸೇರುವವರು ಶ್ರೀಮಂತರ ಮನೆ ಮಕ್ಕಳಲ್ಲ. ಬದಲಾಗಿ ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲದವರು, ಕೆಲಸವಿಲ್ಲ ಎನ್ನುವವರು ಸೈನ್ಯಕ್ಕೆ ಹೋಗಿ ಸೇರುತ್ತಾರೆ. ಇಂತಹವರನ್ನು ಪ್ರಧಾನಿ ಮೋದಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ' ಎಂದು ಸಿಎಂ ಕುಮಾರಸ್ವಾಮಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಹೇಳಿದ್ದರು. ಈ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಬಿಜೆಪಿ, 'ಮಾನ್ಯ ಕುಮಾರಣ್ಣ ಅವರೇ, ಊಟಕ್ಕೆ ಗತಿಯಿಲ್ಲದ ಯುವಕರು ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿರುವ ನಿಮಗೆ ನಾಚಿಕೆಯಾಗಬೇಕು. ಯುವಕರು ದೇಶಭಕ್ತಿಯಿಂದ ಸೈನ್ಯಕ್ಕೆ ಸೇರುತ್ತಾರೆಯೇ ಹೊರತು ಯಾವುದೇ ಆಸೆ, ಆಮಿಷಗಳಿಂದಲ್ಲ. ಸೈನಿಕರ ಬಗ್ಗೆ ಕೀಳಾಗಿ ಮಾತನಾಡಿದ ನಿಮ್ಮನ್ನು ನಾಡಿನ ಜನತೆ ಕ್ಷಮಿಸಲಾರರು' ಎಂದು ಬಿಜೆಪಿ ಕರ್ನಾಟಕ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿರುಗೇಟು ನೀಡಿದೆ.
ಅಲ್ಲದೆ, 'ಸೈನ್ಯಕ್ಕೆ ಸೇರುವವರು ಬಡಕುಟುಂಬದ ಯುವಕರೇ ಹೊರತು ಶ್ರೀಮಂತರ ಮನೆ ಮಕ್ಕಳಲ್ಲ ಎನ್ನುವ ನೀವು, ತಮ್ಮ ಮಗನಿಗೆ ಲೋಕಸಭಾ ಚುನಾವಣಾ ಟಿಕೆಟ್ ಕೊಡಿಸುವಲ್ಲಿ ತೋರಿಸಿದ ಉತ್ಸಾಹವನ್ನು, ದೇಶ ಕಾಯಲು ಆತನನ್ನು ಸೈನ್ಯಕ್ಕೆ ಕಳುಹಿಸುವಲ್ಲಿ ಯಾಕೆ ತೋರಿಸಲಿಲ್ಲ?' ಎಂದೂ ಟೀಕೆ ಮಾಡಿದೆ.